ಸತ್ಯವನ್ನೇ ನುಡಿಸು ಗುರುವೇ ನರವಿಲ್ಲದ ಜಿಹ್ವೆಯೋಳ್ ! ಸ್ಥಿರವಾಗಿ ನೆಲೆಸು ಗುರುವೇ ಮರ್ಕಟ ಈ ಮನದೊಳ್ !

Monday 12 March 2012

ಇದು ಕಥೆಯಲ್ಲ ಜೀವನ....

ಮೈಸೂರಿನ ಆಂದೋಲನ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ ನೈಜ್ಯ ಘಟನೆಯ ನನ್ನ ಸಣ್ಣ ಲೇಖನ 




ಇದು ಕಥೆಯಲ್ಲ ಜೀವನ....

ಆಕೆ ವಿದ್ಯಾವಂತೆ ಬೆಂಗಳೊರಿನ ಪ್ರತಿಷ್ಠಿತ ಕಂಪನಿ ಒಂದರ ಉದ್ಯೋಗಿ, ಕೆಲವು ವರ್ಷಗಳ ಹಿಂದೇ ಸುಟ್ಟು ಹೋದ ಭಾವನೆಗಳ ಮರೆತು ನೆನಪುಗಳ ಜೊತೆ ಜೀವನ ನಡೆಸುತ್ತಿದ್ದ ಚಿಕ್ಕ ವಯಸ್ಸಿನ ವಿಧುರೆ, ಜೀವನದ ದಾರಿಯಲ್ಲಿ  ಹೊಸ ಬೆಳಕ ಕಾಣುವ ಹೊತ್ತಿಗಾಗಲೇ ಅವಳ ಪಾಲಿಗೆ ಕತ್ತಲು ತುಂಬಿ ತುಳುಕುತ್ತಿತ್ತು ಇಂತಹ ಸ್ಥಿತಿಯಲ್ಲೂ ದೃತಿಗೆಡದೆ ಧೈರ್ಯದಿಂದ ಹೆಜ್ಜೆ ಹಾಕುತ್ತಿದ್ದಳು.



ಹೀಗೆ ಕೆಲವು ದಿನಗಳ ಹಿಂದೇ ಇಂಟರ್ನೆಟ್ ಚಾಟಿಂಗ್ ಮುಖಾಂತರ ಬರುಡಾದ ಅವಳ ಬಾಳಲ್ಲಿ ತಂಗಾಳಿಯಂತೆ ಒಬ್ಬ ಪರಿಚಯ ಆದ, ಅವಳ ನೋವುಗಳೆಲ್ಲವನ್ನು ಹಂಚಿಕೊಳ್ಳಲು ಒಬ್ಬ ಗೆಳಯ ಸಿಕ್ಕ ಅವಳ ಎಲ್ಲಾ ಭಾವನೆಗಳಿಗೆ ಸ್ಪಂದಿಸುತ್ತಾ ಹೋದ, ದಿನಂ ಪ್ರತಿ ಅವಳ ಕೆನ್ನೆಯನ್ನು ಸೇರುತ್ತಿದ್ದ ಕಣ್ಣಿರು ನಿಧಾನವಾಗಿ ತನಗೆ ಅರಿವಿಲ್ಲದೆ ಕಣ್ಮರೆಯಾಗಿತ್ತು, ಅವನ ಪರಿಚಯ ತನ್ನನ್ನೇ ತಾನು ನಂಬಲಾರದಷ್ಟು ನಗು, ಸಂತೋಷಗಳನ್ನೂ ಅವಳಿಗೆ ತಂದು ಕೊಟ್ಟಿತು. ಒಂಟಿ ಜೀವ ಒಬ್ಬಂಟಿ ಅನ್ನೋ ಭಾವ ಅವಳಿಂದ ಓಡಿ ಹೋಗಿತ್ತು ಸ್ನೇಹದ ಪ್ರಭಾವವೇ ಅಂತಹದ್ದು  ಯಾರನ್ನ ಹೇಗೆ ಯಾವಾಗ ಬೇಕಾದರು ಜೀವಕ್ಕೆ ಹತ್ತಿರ ಮಾಡುತ್ತೆ ಅಲ್ವ ..! 

ಬೆಳಗ್ಗಿನ ಗುಡ್ ಮಾರ್ನಿಂಗ್ ಯಿಂದ ರಾತ್ರಿಯ ಗುಡ್ ನೈಟ್ ತನಕ ಅವಳ ಮೊಬೈಲ್ ನಲ್ಲಿ ಅವನ ಮೆಸೇಜ್ ಗಳೆ ತುಂಬಿ ಹೋಗಿದ್ದವು, ಅವನ ಸರಳತೆಗೆ ಇವಳ ಮುಗ್ದತೆ ಎಂದೋ ಸೋತು ಶರಣಾಗಿತ್ತು, ಹೌದು ಅವರಿಬ್ಬರ ಆನ್ಲೈನ್  ಚಾಟಿಂಗ್ ಮುಂದುವರೆದು ಮೊಬೈಲ್ ಸಂದೇಶಗಳ ಗಡಿ ದಾಟಿ ಮೂರು ತಿಂಗಳಲ್ಲೇ ದಿನಕ್ಕೆ  3 ಬಾರಿಯಾದರೂ ಮಾತನಾಡುವಷ್ಟು ಸ್ನೇಹ ಬೆಳೆದಿತ್ತು ಆ ಸ್ನೇಹ ಬರೀ ಸ್ನೇಹವಾಗಿ ಉಳಿದಿರಲಿಲ್ಲ ಎಲ್ಲೋ ಒಂದು ಕಡೆ ಪ್ರೇಮದ ಕಂಪು ಆವರಿಸಿತು ಅತಿದೊಡ್ಡ ಸ್ನೇಹದ ನೆರಳಲ್ಲಿ ಪ್ರೀತಿಯ ಚಿಕ್ಕ ಗಿಡ ಚಿಗುರಿ ಒಲವಿನ ಲತೆ ಅರಳಿ ಹೊಸ ಹೊಸ ಭರವಸೆಯ ಪರಿಮಳ ಹರಡಿತು. 

ಆಕೆ ಮತ್ತೆ ಎಲ್ಲದಕ್ಕೂ ಸಿದ್ದಳಾಗಿದ್ದಳು ಧರ್ಮ ಕರ್ಮಗಳ ಗೊಡ್ಡು ಸಂಪ್ರದಾಯ ಮೂಡನಂಬಿಕೆಗಳ ಎದುರು ನಿಂತು  ವಿದಾಯ ಹೇಳಲು ತುದಿಗಾಲಲ್ಲಿ ಕಾತುರದಿಂದ ಕಾಯುತ್ತಿದ್ದಳು, ಅದೊಂದು ದಿನ ಅವನಿಂದ ಇವಳಿಗೆ ಕಾಲ್ ಬಂತು " ತಂದೆಗೆ ಹುಷಾರಿಲ್ಲ ಅರೋಗ್ಯ ಕೈ ಕೊಟ್ಟಿದೆ ತುರ್ತಾಗಿ ಅಪರೇಷನ್ ಮಾಡ್ಬೇಕು ಸ್ವಲ್ಪ ಹಣ ಬೇಕಾಗಿತ್ತು ಎಂದೂ ಬಿಕ್ಕಳಿಸುತ್ತ ಆತ ನುಡಿದ " ಹೆಚ್ಚು ಮಾತನಾಡದೆ ಆಕೆ ಆತನ ಬ್ಯಾಂಕ್ ಅಕೌಂಟ್ ನಂಬರ್ ಪಡೆದು ಕೂತಲ್ಲೇ ನೆಟ್ ಬ್ಯಾಂಕಿಂಗ್ ನಿಂದ 10 ಸಾವಿರ ಹಣವನ್ನ ವರ್ಗಾಯಿಸಿ ಅವನಿಗೆ ಕಾಲ್ ಮಾಡಿದಳು 
"ಯಾವದಕ್ಕೂ ತಲೆ ಕೆಡಿಸ್ಕೋ ಬೇಡ ಡಿಯರ್  ನಿಮ್ಮ ತಂದೆ ಹುಷಾರ್ ಆಗ್ತಾರೆ ಆದಷ್ಟು ಬೇಗ ಮನೆಯಲ್ಲಿ ನಮ್ಮ ವಿಷಯ ಪ್ರಸ್ತಾಪಿಸುತ್ತೇನೆ ಇದುವರೆಗೂ ನಾನಿನ್ನ ನೋಡಿರೋದು ಕೇವಲ ಫೋಟೋದಲ್ಲಿ, ನಿನ್ನ Exam ಮುಗಿದ ತಕ್ಷಣ ಬಿಡುವು ಮಾಡಿಕೊಂಡು ಬೆಂಗಳೊರಿಗೆ ಬಂದು ಬಿಡು ನಿನಗಾಗಿ ಕಾಯ್ತೀನಿ ಈಗ ಟೆನ್ ಥೌಸಂಡ್ ನಿನ್ನ ಅಕೌಂಟ್ ಗೆ ಹಾಕಿದ್ದೇನೆ ಇನ್ನೂ ಬೇಕಾದಲ್ಲಿ ಸಂಕೋಚ ಇಲ್ಲದೆ ಕೇಳು ಮತ್ತೆ ಸಂಜೆ ಕಾಲ್ ಮಾಡು ಓಕೆ " ಈಕೆಯ ಇಷ್ಟುದ್ದ ಮಾತುಗಳಿಗೆ ಅವನು ಹೇಳಿದ್ದು ಕೇವಲ "ಓಕೆ",,,,,... ಬಹುಷಃ ಅದು ಅವಳಿಗೆ ಅವನ ಕೊನೆಯ ಮಾತಾಗಿತ್ತು ಅನ್ನುವ ಯಾವುದೇ ಸುಳಿವು ಅವಳಿಗೆ ಇರಲಿಲ್ಲ...! 

ಹೌದು.... ಅವನು ಕೇವಲ ಹಣಕ್ಕಾಗಿ ಪ್ರೀತಿಯ ಬಲೆ ಬೀಸಿದ್ದ ಸಾಂತ್ವಾನದ ಮುಖವಾಡ ತೊಟ್ಟು ಅವಳನ್ನ ನಂಬಿಸಿದ್ದ ಇಲ್ಲಸಲ್ಲದ ಒಲವ ಕತೆಗಳನ್ನು ಕಟ್ಟಿದ್ದ ಎಲ್ಲದಕ್ಕೂ ಹೆಚ್ಚಾಗಿ ಅವಳ ಭಾವನೆಗಳ ಹೊಲದಲ್ಲಿ ಪ್ರೀತಿಯ ಬೀಜಬಿತ್ತಿ  ಮೋಸದ ಫಲವ ಕೊಟ್ಟು ಹೆಸರಿಲ್ಲದೆ ಹೋದ....  ಅವನನ್ನ ಹಿಡಿಯುವುದು ಅವಳಿಗೆ ದೊಡ್ಡ ವಿಷಯವಾಗಿರಲಿಲ್ಲ ಅದರಿಂದ ಯಾವುದೇ ಪ್ರಯೋಜನವೂ ಅವಳಿಗೆ ಬೇಕಾಗಿರಿಲಿಲ್ಲ,  ಜೀವನ ಅವಳಿಗೆ ಈಗ ಮತ್ತೊಮ್ಮೆ ಮರೆಯಲಾಗದ ಪಾಠ ಕಲಿಸಿದೆ,  ಈಗ ಅವಳೊಂದಿಗೆ ಹೇಳಿಕೊಳ್ಳಲು ಉಳಿದಿರುವುದು ಅವಳ ಅವೇ ಕಣ್ಣಿರು ಮಾತ್ರ, ನಂಬಿಕೆ ಇರಬೇಕು ಆದರೆ ಅತಿನಂಬಿಕೆ ಮೋಸಕ್ಕೆ ಕಾರಣ.

ಪ್ರೀತಿಯ ಹೆಸರಲ್ಲಿ ನಂಬಿದವರನ್ನು ಮೋಸ ಮಾಡೋದು ಎಷ್ಟು ಸರಿ...?

ಅವಳ ಧೈರ್ಯವೇ ಅವಳ ಬೆನ್ನೆಲುಬು, ಅಪರಿಚಿತರ ಆಶ್ರಯಕ್ಕೆ ಆಸೆ ಪಡುವ ಮುಗ್ಧ ಹೆಣ್ಣಿನ ಕಣ್ಣಿರು ಎಂದೂ ಕೊನೆಯಾಗದು.ಒಂದು ಬಾರಿ ಎಡವುದಕ್ಕೆ ಮುಂಚೆಯೇ ಎಚ್ಚೆತ್ತರೆ ಈ ಅನಾಹುತಗಳಿಗೆ ದಾರಿಯಾಗದು. ಒಂದು ಮಾತ್ರ ಸತ್ಯ. ಅವಳ ಕಥೆ ಕೇಳಬೇಕಾದರೆ ನನಗೆ ತಿಳಿದಿದ್ದು ಇಷ್ಟೇ, ಅವಳು ಇನ್ನೊಬ್ಬನ ಆಶ್ರಯ ಪಡೆಯ ಬೇಕೆನ್ನೋದನ್ನ ಬಿಟ್ಟು, ಅವಳ ಮೊದಲ ಜೀವನದ ಕಡೆ ಗಮನ ಕೊಡಬಹುದು, ನನ್ನ ಆತ್ಮಿಯ ಸ್ನೇಹಿತ ಸ್ನೇಹಿತೆಯರಿಗೆ ನಾನು ಹೇಳುವುದಿಷ್ಟೇ, ನೊಂದ ಜೀವಗಳನ್ನು ಮತ್ತೆ ನೋಯಿಸ ಬೇಡಿ, ಪ್ರೀತಿ ಹೆಸರಲ್ಲಿ ಮೋಸ ಮಾಡಬೇಡಿ.

ಎಲ್ಲದಕ್ಕೂ ಸಾವೆಂಬುದೇ ಕೊನೆಯಲ್ಲ ಬದುಕಿ ನಿಮ್ಮ ಜೀವನದಲ್ಲಿ ಸಾಧಿಸಿ ತೋರಿಸಿ (ಗೆಳತಿ ಭಾನುಮತಿ)  



ಪ್ರೀತಿಯಿಂದ
?ಮಂಜು,ಎಂ,ದೊಡ್ಡಮನಿ
(ಮರೀಚಿಕೆ)