Wednesday, 10 October 2012
Sunday, 30 September 2012
ಆತ ಚಂದಿರ ಈಕೆ ನೈದಿಲೆ...!
ಕಾಲೇಜ್ ಡೈರಿ ಮಾಸ ಪತ್ರಿಕೆಯಲ್ಲಿ ಪ್ರಕಟಿತ ನನ್ನ ಲೇಖನ
ಆಕೆ ಅಪ್ಪಟ ಮಲೆನಾಡಿನ ಹುಡುಗಿ, ಕಷ್ಟಗಳಲ್ಲೇ ತನ್ನ ಜೀವನವನ್ನ ಕಟ್ಟಿಕೊಂಡವಳು ತಾಯಿಯ ಮಡಿಲಲ್ಲಿ ತಂದೆ ಇಲ್ಲದೆ ಬೆಳೆದ ಅವಳು ದಿನವೂ ಕಟ್ಟುತ್ತಿದ್ದ ಕನಸುಗಳಿಗೆ ಲೆಕ್ಕವಿರಲಿಲ್ಲ.. ನಿಜ ಕನಸು ಕಟ್ಟುವ ವಯಸ್ಸೇ ಅದು.. ಕಾಲೇಜು ದಿನಗಳಲ್ಲಿ ಅವನ ಜೊತೆ ಕಟ್ಟಿದ ಕನಸುಗಳು ಇನ್ನೂ ಹಾಗೆ ಉಳಿದಿವೆ, ಹೌದು ಅವನೆಂದರೆ ಅವನೇ ಇವಳ ಕನಸುಗಳ ನನಸಾಗಿಸೋ ಭರವಸೆ ಮೂಡಿಸಿದ ಬೇವಿನಂತ ಬದುಕಿನ ದಾರಿಯಲ್ಲಿ ಅಪರೂಪವೆಂಬಂತೆ ಬೆಲ್ಲದ ಕಣವಾಗಿ ಸಿಕ್ಕ ಅವಳ ಭವಿಷ್ಯದ ನಾಯಕ.. ಹ್ಮಂ ಅವನೆಂದರೆ ಅವನೇ ಅವಳ ಒಂಟಿ ಬದುಕ ದೋಣಿಯ ನಾವಿಕ,
ಮಲೆನಾಡಿನ ಸುಂದರ ದಿನಗಳು ಜೊತೆಗೆ ಚಿಟಪಟ ಮಳೆ, ಅವನ ಪರಿಚಯ ಆಗಿದ್ದೆ ಅವಳಿಗೆ ಅಂತಹ ಚಿಟಪಟ ಮಳೆಯಲ್ಲಿ, ಕಾಲೇಜು ಮುಗಿಸಿಕೊಂಡು ಬಸ್ ಸ್ಟಾಪ್ ಗೆ ಮಳೆಯಲ್ಲಿ ತೊಯ್ದುಕೊಂಡು ಹೋಗುತ್ತಿದ್ದವವನ ಇವಳಾಗಿಗೆ ಮಾತನಾಡಿಸಿ ಒಂದೇ ಛತ್ರಿ ಯಲ್ಲಿ ಇಬ್ಬರು ನಡೆದ ದಿನದಿಂದ ಮುಂದೆ ಕೈ ಕೈ ಹಿಡಿದು ಭುಜಕ್ಕೆ ಭುಜ ತಾಗಿಸಿಕೊಂಡು ನಡೆದ ದಿನಗಳ ಲೆಕ್ಕವಿಲ್ಲ, ಕಾಲೇಜಿಗೂ ಬಸ್ ಸ್ಟಾಪ್ ಗೂ ಹತ್ತಿರವಲ್ಲದ ಹತ್ತಿರದ ಮದ್ಯದಲ್ಲಿ ಒಂದು ಹಳ್ಳಿಮರ ಅದಕ್ಕೆ ಸುತ್ತಲು ಕೂತು ಹರಟಲೆಂದೇ ಕಟ್ಟಿರುವ ಕಲ್ಲಿನ ಕಟ್ಟೆ, ಅಲ್ಲಿ ಪ್ರತಿ ದಿನ ಕಾಲೇಜು ಮುಗಿದ ಕೂಡಲೇ ಅವಳು ಅವನಿಗಾಗಿ ಕೂರುತ್ತಾಳೆ, ತುಸು ಹೊತ್ತು ಅವನೊಂದಿಗೆ ಚಲ್ಲಾಡಲು ಹೇಳಿ ಮಾಡಿಸಿದ ಸೂಕ್ತ ಜಾಗವೆಂದರೆ ಆ ಹಳ್ಳಿಮರದ ಕಟ್ಟೆ , ಅವನು ಕೂಡ ತಪ್ಪದೆ ಬರುತ್ತಿದ್ದ, ಎಷ್ಟು ಧನ ಕರ ಕಾರು ಬಸ್ಸು ಸ್ನೇಹಿತರು ಊರಿನ ಜನರು ಅದೇ ದಾರಿಯಲ್ಲೇ ಹಾದು ಹೋದರು ಅದ್ಯಾವುದರ ಚಿಂತೆಯ ಗೋಜು ಇವರಿಗಿರಲಿಲ್ಲ, ಪವಿತ್ರ ಪ್ರೇಮದ ಗುಂಗಿನಲಿ ಮುಳುಗಿದ ಯಾರಿಗಾದರು ಅಷ್ಟೇ ಅಲ್ವ..!? ಜಗತ್ತೇ ಕಣ್ ಮುಚ್ಚಿರುತ್ತದೆ ಎಂಬ ಭಾವ ಅವರಲ್ಲಿ... ಇವರಿಬ್ಬರ ಪ್ರೀತಿ ಇಡಿ ಊರಿಗೆ ಗೊತ್ತಿತ್ತು ಮನೆಯವರಿಂದ ಯಾವುದೇ Restriction ಇರಲಿಲ್ಲ ಬದಲಿಗೆ ಮನೆಯವರೇ ಇಬ್ಬರ ಸಂಭಂದ ಒಪ್ಪಿ ಇಬ್ಬರ ಓದಿನ ನಂತರ ಮದುವೆ ಮಾಡಲು ತೀರ್ಮಾನಿಸಿದ್ದರು... ಅದಕ್ಕಾಗಿ ಅವಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಳು ಅಂದುಕೊಂಡಂತೆ ತಮ್ಮ ಓದಿನ ಕೊನೆಯದಿನಗಳು ಬಂದವು..
ವಿಧಿಯ ಪಗಡೆಯಾಟ ಶುರುವಾಗಿದ್ದೆ ಅಲ್ಲಿಂದ...
ಮನೆಯವರೆಲ್ಲ ಮದುವೆಯ ಬಗ್ಗೆ ಪ್ರಸ್ತಾಪಿಸಿದರು ಆದರೆ ಇವನು ಸಮ್ಮತಿಸಲಿಲ್ಲ, ಈಗತಾನೇ ಓದು ಮುಗಿದಿದೆ ಎಲ್ಲಾದರು ಒಂದು ಕೆಲಸ ಸಿಗುವವರೆಗೂ ಮದುವೆ ಬೇಡ, ದುಡಿಮೆ ಇಲ್ಲದೆ ಮದುವೆ ಮಾಡಿಕೊಂಡು ನಾಳೆ ಜೀವನ ಕಷ್ಟವಾದೀತು ತಂದೆ ಮಾಡಿದ ಆಸ್ತಿ ಕೂತು ತಿಂದರು ಕರಗೋದಿಲ್ಲ ಆದರು ಗಂಡಿಗೊಂದು ಕೆಲಸ ಅಂತ ಬೇಕಲ್ಲ ಅದಕ್ಕಾಗಿಯಾದರು ತಾನು ದುಡಿಯ ಬೇಕು ಎಂದೂ ಒಂದೇ ಹಠ ಹಿಡಿದು ಕೂತ, ಅವಳ ಹೂ ಕನಸುಗಳ ಮೇಲೆ ದೊಡ್ಡ ಕಲ್ಲೇ ಬಿದ್ದಂತಾಯಿತು ಆದರು ನಿರಾಶೆಗೆ ಒಳಗಾಗದೆ ಅವನ ಮಾತಲ್ಲಿ ಸತ್ವವಿದೆ ಅವನ ನಿರ್ಧಾರ ಎಂದಿಗೂ ಸರಿಯಾಗಿರುತ್ತದೆ ಎಂದೂ ಅವಳು ತನ್ನ ಕನಸುಗಳನ್ನ ಯಾರಿಗೂ ಕಾಣದೆ ತನ್ನ ಕಣ್ಣಂಚಿನ ಹನಿಗಳಲ್ಲೇ ಬಚ್ಚಿಟ್ಟಳು. ದೊಡ್ಡವರೆಲ್ಲ ಅವನ ಮಾತಿಗೆ ತಲೆಯಾಡಿಸಿದರು. ಕೆಲವು ದಿನಗಳು ಹಾಗೆ ಕಳೆಯಿತು ಅವನ ಆಸೆಯಂತೆಯೇ ಬೆಂಗಳೂರಿನಿಂದ ಸ್ನೇಹಿತನ ಮೂಲಕ ಕೆಲಸದ ಆಹ್ವಾನ ಬಂತು ತಡಮಾಡದೆ ಅವನು ತನ್ನ ಲಗೇಜಿನೊಂದಿಗೆ ಬೆಂಗಳೂರಿಗೆ ಹೊಂಟು ನಿಂತು ಮನೆಯವರಿಗೆಲ್ಲ ನಮಸ್ಕರಿಸಿದ ಮನೆಯಿಂದ ಹೊರ ಹೋರಟು ಅವಳ ಮನೆ ಕಡೆ ಬಂದ ಅವಳು ಕಾಣಲಿಲ್ಲ ಭಾವಿ ಅತ್ತೆ-ಮಾವರಿಗೆ ನಮಸ್ಕರಿಸಿ ಅಲ್ಲಿಂದ ಸೀದಾ ಹಳ್ಳಿಮರದ ಕಟ್ಟೆಗೆ ಹೋದ ಅವನ ಊಹೇ ಸರಿಯಾಗಿಯೇ ಇತ್ತು ಅವನಗಾಗಿ ಅವಳು ಅಲ್ಲೇ ಕಾಯುತ್ತ ಕೂತಿದ್ದಳು ಕಣ್ಣಲಿ ಪ್ರೇಮಗಂಗೆ ತುಂಬಿಕೊಂಡು.. ಅಂದು ಅವಳನ್ನ ಸಮಾಧಾನಿಸಿ ಬೇಗನೆ ಬಂದು ಬಿಡುವೆ ಚಿಂತಿಸ ಬೇಡ ಬಂದು ನಿನ್ನನ್ನು ಕರೆದುಕೊಂಡು ಹೋಗುವೆ ಎಂದೂ ಹೋದವನು ಮತ್ತೆ ಬರಲೇ ಇಲ್ಲಾ... ದುರದೃಷ್ಟ ಅಂದು ಬೆಂಗಳೂರಿಗೆ ಹೋರಾಟ ಬಸ್ ಬೆಂಗಳೂರನ್ನು ತಲುಪಲೇ ಇಲ್ಲಾ ಡ್ರೈವೆರ್ ನ ನಿರ್ಲಕ್ಷದಿಂದ ಬಸ್ ಚಲನೆ ತಪ್ಪಿ ಕಾಣಲಾರದಷ್ಟು ಪ್ರಪಾತಕ್ಕೆ ಉರಳಿ ಬಿತ್ತು..
ಅತ್ತು ಅತ್ತು ಕಣ್ಣಿರು ಬತ್ತಿ ಹೋಗಿವೆ, ಊಟ ನಿದ್ದೆ ಎಲ್ಲಾ ಬಿಟ್ಟು ಗುಡಿಯೋಳಗಿನ ದೇವತೆಯಂತೆ ಇವಳು ಸುಮ್ಮನೆ ಕಾಯುತ್ತಾ ಕೂತ್ತಿದ್ದಾಳೆ ಅದೇ ಹಳ್ಳಿ ಮರದ ಕೆಳಗೆ ಅವನು ಬಂದೆ ಬರುತ್ತಾನೆಂದು ನಂಬಿ, ಅವಳ ನಂಬಿಕೆ ಹುಸಿ ಎಂಬುದು ತಿಳಿದ ವಿಷಯ ಆದರು ಕಾಯುತ್ತೇನೆಂದು ಕೂತ ಮನಸ್ಸಿಗೆ ಮತ್ತೊಂದು ಮನಸ್ಸಿನ ಅಧ್ಯಾಯದ ಅವಶ್ಯಕತೆ ಇದೇ ಅವನಿನ್ನೂ ಕೇವಲ ನೆನಪು ಅವಳ ಕಾಯುವಿಕೆ ನಿಲ್ಲಬೇಕು ಹೊಸ ಜೀವನದ ಅಧ್ಯಾಯ ಶುರುವಾಗಬೇಕು ಅಲ್ಲಿಯವರೆಗೂ ಅವಳ ಕಾಯುವಿಕೆ ನಿಲ್ಲದು ಆ ಕಾಯುವಿಕೆ ನಿಂತರು ಅವನ ನೆನಪು ಅಳಿಸದು ...
- ಇಲ್ಲಿ ಆತ ಚಂದಿರ ಈಕೆ ನೈದಿಲೆ, ಇವಳು ದಿನನಿತ್ಯ ಅವನಿಗಾಗಿ ಕಾಯುತ್ತಾಳೆ ಅವನು ತಪ್ಪದೆ ಬರುತ್ತಾನೆ ಒಬ್ಬರನೊಬ್ಬರು ಹೇಳಲಾರದಷ್ಟು ಪ್ರೀತಿಸುತ್ತಾರೆ ಒಂದಾಗುವ ಆಸೆಯೇಲ್ಲೇ ಕನಸು ಕಾಣುತ್ತಾರೆ ಆದರೆ ತಮ್ಮ ನಡುವೆ ಹೇಳದೆ ಕೇಳದೆ ಬರುವ ಅಮವಾಸೆಯನ್ನೇಕೆ ಮರೆಯುತ್ತಾರೆ..? ಪ್ರೀತಿಸುವ ಹೃದಯಗಳಿಗೆ ಕಾಯುವಿಕೆಯೇನು ದೊಡ್ಡ ಮಾತಲ್ಲ... ಅದೊಂದು ಮದ್ದಿಲ್ಲದ ಕಾಯಿಲೆ.. ಆದರೆ ಎಲ್ಲಾ ಕಾಯುವಿಕೆಗೂ ಅರ್ಥವಿರಬೇಕಲ್ಲ..!? ನ್ಯಾಯ ಸಿಗಬೇಕಲ್ಲ..!? ಕೆಲವೊಮ್ಮೆ ಆ ದೇವರೇ ಕೆಲವರ ಪಾಲಿಗೆ ವೈರಿಯಾಗಿ ಎದುರು ನಿಲ್ಲುತ್ತಾನೆ.. ಪ್ರವಾಹದಲ್ಲಿ ಅಂಬಿಗನನ್ನೇ ನಂಬಿ ಕೊಂಡಾಗ ಅವನು ಕೈ ಕೊಟ್ಟರೆ ಕೊನೆಯದಾಗಿ ಕೂತ ದೋಣಿಯ ಮೇಲಾದರೂ ನಂಬಿಕೆ ಇರುತ್ತದೆ ಮುಳುಗದಂತೆ ತೇಲುಸುತ್ತದೆ ಎಂದೂ, ಆ ದೋಣೆ ಕೂಡ ಒಂದು ದೊಡ್ಡ ಅಲೆಗೆ ಬುಡಮೇಲಾದರೆ ನಂಬಿಕೆ ಇನ್ನೆಲ್ಲಿ !? ಈಜು ಬಂದರೆ ಅಲೆಗಳನ್ನು ಎದುರಿಸಿ ಹೇಗೋ ಉಳಿದು ಬರಬಹುದು ಆದರೆ ಸಾವೆಂಬ ಸಾವೇ ಬೆನ್ನೇರಿ ಕೂತು ಬದುಕು ನರವೇ ನೋಡೋಣ ಎಂದೂ ಸುಳಿಗೆ ಸಿಲುಕಿಸಿ ಸವಾಲು ಎಸೆದರೆ ಬದುಕುವ ಮಾತೆಲ್ಲಿ..!?
- ದೊಡ್ಡಮನಿ.ಎಂ.ಮಂಜುನಾಥ
ದಾವಣಗೆರೆ...
Thursday, 2 August 2012
ಅವಳು ಅವನು ಮತ್ತೆ ನಾವು...!
ಕಾಲೇಜ್ ಡೈರಿ ಎಂಬ ಹೊಚ್ಚ ಹೊಸ ಮಾಸ ಪತ್ರಿಕೆಯಲ್ಲಿ ನಾನು ಬರೆದ ಲೇಖನ.... ನಿಮಗೆ ಇಷ್ಟವಾಗುತ್ತದೆ ಎಂದೂ ಭಾವಿಸಿದ್ದೇನೆ... ಈ ಪತ್ರಿಕೆಯ ರೂವಾರಿ Gubbachchi Sathish ರವರಿಗೆ ಶುಭವಾಗಲಿ....
ಅವಳು ಅವನು ಮತ್ತೆ ನಾವು...!
- ತುಳಸಿ ಕಟ್ಟೆಯ ಮದ್ಯೆ ಹಚ್ಚಿದ ನಂದಾ ದೀಪದಂತೆ ಅವಳ ಸಂಸಾರ. ಬದುಕೆಂದರೆ ಅವಳಿಗೆ ಅವನು ಅವನಿಗೆ ಇವಳು ಅಷ್ಟೇ... ಲೋಕದ ಯಾವ ಶಕ್ತಿಯು ಅವರನ್ನು ಬೇರ್ಪಡಿಸಲಾರದಂತ ನಿಷ್ಕಲ್ಮಶ ಪ್ರೇಮ ಅವರದು, ಮನೆಯವರ ವಿರೋದದಿಂದ ದೇವಸ್ಥಾನದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ತುಂಬಾ ಸರಳವಾಗಿ ಆದ ಅವಳ ಮದುವೆಗೆ ಇನ್ನೂ ವರ್ಷ ಕೂಡ ತುಂಬಿಲ್ಲ, ಬಾಡಿಗೆ ಮನೆಯೊಂದರ ಹೊಸ್ತಿಲ ಮೇಲೆ ತುಂಬಿಟ್ಟ ಅಕ್ಕಿಯ ಸೇರನ್ನ ಬಲಗಾಲಲ್ಲಿ ಒದ್ದು ದೇವರ ಕೋಣೆಯಲ್ಲಿ ದೀಪ ಹಚ್ಚಿದ ನೆನಪು ಇನ್ನೂ ಮಾಸಿಲ್ಲ, ತಾನು ಕಳೆದುಕೊಂಡ ಅಣ್ಣ ತಂಗಿ ಅಪ್ಪ ಅಮ್ಮ ಎಲ್ಲಾ ಪ್ರೀತಿಯನ್ನು ಅವನಲಿ ಕಂಡುಕೊಂಡಿದ್ದಾಳೆ , ಆಗಲೇ ಆ ಸಣ್ಣ ಮನೆಯಲಿ ತೊಟ್ಟಿಲು ತೂಗಲು ಸಿದ್ದಳಾಗಿ ನೆಮ್ಮದಿಯ ತೇರು ಎಳೆಯಲು ತಯಾರಾಗಿ ನಿಂತಿದ್ದಾಳೆ, ಅವನ ಜೊತೆ ಕಟ್ಟಿದ ಕನಸುಗಳನ್ನ ರಾಶಿ ಹಾಕಿ ಲೆಕ್ಕ ಹಾಕುತ್ತ ಸಂಜೆ ಅವನು ತರುವ ಮಲ್ಲಿಗೆಗಾಗಿ ಕಾಯುತ್ತಿದ್ದಾಳೆ..
ಸಂಜೆಯಾಗಿದೆ ಸೂರ್ಯ ಮುಳುಗುತ್ತಿದ್ದಾನೆ ಅವಳ ಕಾಯುವಿಕೆ ನಿಂತಿದೆ ಜೊತೆಗೆ ಎದೆ ಬಡಿತ ಹೆಚ್ಚಿದೆ ಅದೋ ಬೆಳ್ಳಿ ತೇರಿನಿಂದ ಅವನನ್ನು ಬಿಳಿ ವಸ್ತ್ರದಾರಿಗಳ್ಯಾರೋ ಕರೆದುಕೊ ಂಡು ಬರುತ್ತಿದ್ದರೆ ಬಂದವರು ಮನೆಯ ಒಳಗೆ ಮಲಗಿಸಿ ಕೈ ಕಟ್ಟಿ ನಿಂತಿದ್ದರೆ.ಅವನ ಕೈಯಲ್ಲಿ ಹರಿದು ತುಂಡಾದ ಮಲ್ಲಿಗೆ ಹೂವಿನ ಮಾಲೆ ಇನ್ನೂ ಹಾಗೆ ಇದೇ, ಮೈ ಮೇಲೆ ಅಲ್ಲಲ್ಲಿ ಕೆಂಪು ಬಣ್ಣದ ಕಲೆಗಳು ಎದ್ದು ಕಾಣುತ್ತಿವೆ. ಅವನು ಒಂದು ಮಾತನಾಡದೆ ಶವಾಸನದಲ್ಲಿ ನಿರತನಾಗಿದ್ದಾನೆ, ಕೆಲವು ಪರಿಚಿತರು ಅವನ ಎದೆಯ ಮೇಲೆ ಹೂ ಮಾಲೆಗಳನ್ನು ಇಟ್ಟು ಕಣ್ಣೊರೆಸಿಕೊಂಡು ಹಿಂದೇ ಸರಿಯುತ್ತಿದ್ದಾರೆ, ಇವಳಿಗೆ ದಿಕ್ಕು ತೋಚದಾಗಿದೆ, ಕಣ್ಣಲ್ಲಿ ಒಂದು ಹನಿ ನೀರಿಲ್ಲ ಅಸಲಿಗೆ ಇಲ್ಲಿ ನಡೆಯುತ್ತಿರುವುದು ವಾಸ್ತವವೋ ಕನಸೋ ಒಂದು ಅವಳಿಗೆ ತಿಳಿಯದೆ ನಿಂತಲ್ಲೇ ಕುಸಿಯುತ್ತಿದ್ದಾಳೆ. ಸಂತ್ವಾನ ಹೇಳುವಂತೆ ಕೆಲವು ಗೆಳತಿಯರ ಕೈಗಳು ಅವಳ ಭುಜವನ್ನು ಹಿಡಿದಿವೆ. ಅಲ್ಲಲ್ಲಿ ಗುಸುಗುಸು ಮಾತುಗಳು ಕೇಳಿ ಬರುತ್ತಿವೆ ಅವಳಿಗೆ ಅವ್ಯಾವುದರ ಅರಿವಿಲ್ಲ, ಅವನ ಈ ಸಾವಿಗೆ ಇಲ್ಲಿ ಕಾರಣಬೇಕಿಲ್ಲ ಏಕೆಂದರೆ ಅವಳಪಾಲಿಗೆ ಜಗವೇ ನಿಂತಿದೆ.
ಇಂದಿಗೆ ಇದೆಲ್ಲ ಗತಿಸಿ ಕೆಲವು ವರ್ಷಗಳೇ ಕಳೆದಿವೆ ಅವಳ ಜೊತೆ ಅವನಿಲ್ಲ ನಿಜ ಆದರೆ ಅವನು ಕೊಟ್ಟು ಬಿಟ್ಟು ಹೋದ ಅವನ ಪ್ರತಿರೂಪ ಮನೆಯ ತುಂಬಾ ಓಡಾಡುತ್ತ ಅವಳ ನೋವು ಮರೆಸಿದೆ. ಅವಳೀಗ ಅವಳಾಗಿಲ್ಲ ಬದಲಿಗೆ ತನ್ನೆಲ್ಲ ದುಃಖವನ್ನು ಮರೆತು ನೆನಪುಗಳ ಹೊಂಡದಲಿ ಶುಭ್ರವಾಗಿ ಮೈದೆಳೆದು ಮತ್ತೆ ತಾವರೆಯಾಗಿ ಮೂಡಿದ್ದಾಳೆ. ತಾನಾಯಿತು ತನ್ನ ಮಗುವಾಯಿತು ಟಿವಿಯ ಮೇಲೆ ಇಟ್ಟ ಅವನ ನಗುತುಂಬಿದ ಚಿತ್ತಾರವಾಯಿತು ಇವುಗಳ ಜೊತೆ ಆಸ್ತಿಕತೆಯ ಬದಕು ಅವಳಿಗೆ ಶಾಂತಿಯನ್ನು ತಂದುಕೊಟ್ಟಿದೆ. ಈಗಾಕೆ ಆಶ್ರಮವೊಂದರಲ್ಲಿ ಸೇವೆ ಮಾಡುತ್ತಿದ್ದಾಳೆ ಭಕ್ತಿ ಪಥದ ಬಗ್ಗೆ ಪ್ರತಿನಿತ್ಯ ನೂರಾರು ಜನರಿಗೆ ಪ್ರವಚನ ನೀಡುತ್ತಿದ್ದಾಳೆ, ಅವನು ಹೋದ ಎಂದೂ ಅವಳು ಕೊರಗಲಿಲ್ಲ ತನ್ನ ಮಗುವಿನ ಒಳ್ಳೆ ಭವಿಷ್ಯಕ್ಕೆ ದಾರಿಯಾಗುತ್ತಿದ್ದಾಳೆ ನೂರಾರು ನಿರಾಶ್ರಿತರಿಗೆ ಆಶ್ರಯ ನೀಡಿ ಅವರ ಕಷ್ಟ ಸುಖಗಳಲ್ಲಿ ಬಾಗಿಯಾಗುತ್ತಿದ್ದಾಳೆ, ತನಗಾಗಿ ಅಲ್ಲಾ ತನ್ನ ಪ್ರೀತಿಸುವ ಮಗುವಿಗಾಗಿ ತನ್ನ ಪ್ರೀತಿಯಿಂದ ಸುತ್ತುವ ಆಶ್ರಮದ ಜನರಿಗಾಗಿ ಅವಳು ಶ್ರಮಿಸುತ್ತಿದ್ದಾಳೆ ಅವರಿಗಾಗಿ ತನ್ನನ್ನು ತಾನೇ ಸಮರ್ಪಿಸಿಕೊಂಡಿದ್ದಾಳೆ.
- ಅವಳ ಈ ಕಥೆ ಕೇಳಿದರೆ ನಿಜ ಅನಿಸುತ್ತದಲ್ಲವ "ಈಗ ಇದದ್ದು ಕ್ಷಣಾರ್ಧದಲ್ಲಿ ಇರುವುದಿಲ್ಲ ಪ್ರೀತಿಸಿ ಆರಾಧಿಸಿ ಪೂಜಿಸೋ ಅಮೂಲ್ಯವಾದ ವಸ್ತು ಕೆಲವೊಮ್ಮೆ ನಮ್ಮಿಂದ ಹೇಳಲಾರದಷ್ಟು ದೂರ ಸಾಗುತ್ತದೆ, ಅದೆಷ್ಟೋ ಭಾವುಕ ಮನಸುಗಳ ಬಾಳಿನಲಿ ಈ ಮಾತು ನಿಜವಾಗಿರುತ್ತದೆ ಇದು ನಿಜ ಕೂಡ, ಜೀವನವೇ ಹೀಗೆ ಅಂದುಕೊಂಡಂತೆ ಏನು ಸಾಗಲು ಬಿಡುವುದಿಲ್ಲ, ಬೇಕೆಂದುಕೊಂಡದನ್ನು ಕೊಡುವುದಿಲ್ಲ ಊಹೆಗೂ ಮೀರಿದ ತಿರಿವುಗಳಿಗೆ ನಮ್ಮನ್ನು ತಂದು ನಿಲ್ಲಿಸಿ ತಾನು ಕೇಕೆ ಹಾಕಿ ಘಹಗಹಿಸಿ ನಗುತ್ತದೆ. ಯಾರನ್ನ ದೂರುವುದು ಯಾರಿಗೆ ಹಿಡಿಶಾಪ ಹಾಕುವುದು ಹೇಗೆ ಹಣೆಬರಹ ಬರೆದ ಬರಹಗಾರನನ್ನ ಹುಡುಕಿ ತಿದ್ದು ಎಂದೂ ಬೇಡುವುದು... ಇಂತಹ ಇಲ್ಲಸಲ್ಲದ ಪ್ರಶ್ನೆಗಳನ್ನ ಹುಟ್ಟುಹಾಕಿ ಉತ್ತರವಿಲ್ಲದೆ ಮುಳ್ಳುಗಳ ಹಾಸಿಗೆಯಮೇಲೆ ಮಲಗಿ ನೆಮ್ಮದಿ ಇರದೇ ಚಡಪಡಿಸುವಂತೆ ಮಾಡಿ ನಿರ್ಜೀವ ಸ್ಥಿತಿಗೆ ನಮ್ಮನ್ನು ತರುತ್ತದೆ ಈ ಜೀವನಬೆಂಬ ಜೀವನ ". ಹಾಗೆಂದು ಸುಮ್ಮನೆ ಕೂರಲು ಕೊರಗಲು ದುಃಖಕ್ಕೆ ಶರಣಾಗಲು ಆಗುತ್ತಾ..? ಬಂದದ್ದನ್ನು ಎದುರಿಸಿ ನಿಲ್ಲಬೇಕು..ಎಲ್ಲವನ್ನು ಮರೆಯಲಾಗದಿದ್ದರು ಕೆಲವೊಂದನ್ನು ಮರೆತು ಸಾಧನೆಯ ಹಾದಿ ಹಿಡಿಯಬೇಕು ವಿಧಿಯನ್ನ ಸೋಲಿಸಲಾಗದಿದ್ದರು ಬದುಕನ್ನ ಗೆಲ್ಲಬೇಕು, ದಿನ ಕಳೆದಂತೆ ನಮ್ಮ ಪಯಣದ ಕಡೆಯ ಕರೆ ಬರುತ್ತದೆ ಅಲ್ಲಿಯವರಿಗೂ ನಾವು ಅವಳಂತೆ ಬಾಳಬೇಕು..
ದಾವಣಗೆರೆ
Monday, 9 April 2012
ನಿನ್ನ ನೆನಪು ಮಾಡಿಕೊಂಡು ಒಬ್ಬನೇ ಈ ಬೆಟ್ಟದ ತುದಿಯಲಿ..!
ಓಲೆಗರಿ 2
ತೆರೆದರೆ ಮುಚ್ಚ ಬಯಸದ
ನೆನಪಿನ ಪುಟಗಳು
ಎದೆಗೊಮ್ಮೆ ಅಪ್ಪಿಕೊಂಡು
ಮತ್ತೆ ಮತ್ತೆ ಮುತ್ತಿಡುವೆ
ನೀನಿರದ ವೇಳೆ ನಾನೇ ಬರೆದ
ಡೈರಿಯ ಕೈಯಲಿ ಹಿಡಿದು..!
- ಮುಚ್ಚಿದ ಪುಟಗಳ ತೆರೆಯುತ್ತ ಹೋದರೆ ಸವಿದಷ್ಟು ಸವಿಯಬೇಕೆನಿಸುವ ಆ ನೆನಪುಗಳು ಇಂದಿಗೂ ನನ್ನ ಬಳಿ ಜೀವಂತ; ಕ್ಷಣ ನೆನೆದರೆ ದೃಶ್ಯಾವಳಿಯಂತೆ ಕಣ್ಣ ಮುಂದೆ ಗೋಚರಿಸುತ್ತವೆ ಕುಮುದ, ಆ ವಯಸ್ಸಿನಲ್ಲೇ ಹುಡುಗ ಹುಡುಗಿ ಇಬ್ಬರು ಜೊತೆಗೆ ಕೈ ಕೈ ಹಿಡಿದು ರಸ್ತೆ ಬದಿಯಲ್ಲಿ ನಡೆದು ಹೋಗುವುದೆಂದರೆ ಅಂದಿನ ಮಟ್ಟಿಗೆ ಸಾಮಾನ್ಯ ಮಾತಲ್ಲ, ಆದರು ನೀನು ನನ್ನ ಕೈ ಹಿಡಿದು ಎದೆಗೊರಗಿ ನಡೆಯುತ್ತಿದ್ದೆಯಲ್ಲ ಅಂದು ನಿನಗಿದ್ದ ಆ ಧೈರ್ಯ ನನಗಿರಲಿಲ್ಲ ಬಿಡು. ನೆನಪಿದೆಯ ಕುಮುದ ಆ ಒಂದು ಸಂಜೆ ಅದೇಕೋ ಸೂರ್ಯನ ಸುಳಿವಿರಲಿಲ್ಲ ತಾರೆಗಳನೆಲ್ಲ ತವರಿಗೆ ಕಳುಹಿಸಿ ಬೆಳ್ಳಿ ಮುಗಿಲು ಕಪ್ಪು ಬಟ್ಟೆಯ ತೊಟ್ಟು ನಿಂತಾಗ ಯಾವುದರ ಸುಳಿವಿಲ್ಲದೆ ಬಂತಲ್ಲ ಘನಘೋರ ಮಳೆ ನಾವು ನಾಲ್ಕು ಹೆಜ್ಜೆ ಇಡುವಷ್ಟರಲ್ಲೇ ತೋಯ್ದು ತೊಪ್ಪೆಯಾದಾಗ ನೀನು ನನ್ನ ಬಿಗಿಯಾಗಿ ಅಪ್ಪಿಕೊಂಡ ಕ್ಷಣ. ಅಂದು ನೀ ನನಗಿಷ್ಟವಿಲ್ಲದ ತೆಳುವಾದ ಬಿಳಿ ಟೀ ಶರ್ಟ್ ಹಾಕಿದ್ದೆ ಒಂದು ನೂರು ಬಾರಿ ಹೇಳಿದ್ದೆನೇನೋ ಆ ಟಿ ಶರ್ಟ್ ಹಾಕ್ಬೇಡ ಅಂತ, ನಿಜ ಹೇಳಲಾ ಕುಮುದ .. ಎಂದೂ ನಿನ್ನ ಸರಿಯಾಗಿ ನೋಡದವನು ಅಂದು ನೀನು ಮಳೆಗೆ ತೋಯ್ದು ನಡುಗುತ್ತಿದ್ದಾಗ ಕಣ್ಣು ಮಿಟುಕದೆ ನೋಡುತ್ತಿದ್ದೆ, ಅಂದು ನಿನ್ನ ಸೌಂದರ್ಯ ಹೆಚ್ಚು ಮಾಡಿದ್ದು ಮಳೆಯೋ ಇಲ್ಲಾ ನೀನು ಹಾಕಿದ ಆ ಟಿ ಶರ್ಟೋ.. ಇಂದಿಗೂ ಬಗೆ ಹರಿಯದ ಪ್ರಶ್ನೆ.. ಅಂದಿನಿಂದ ಇಂದಿನವರೆಗೂ ಮತ್ತೆ ಆ ಮಳೆಗಾಗಿ ಕಾಯುತ್ತಿದ್ದೇನೆ ಕುಮುದ... ಸಾಧ್ಯವಾದಲ್ಲಿ ಮತ್ತೊಮ್ಮೆ ಅದೇ ಟೀ ಶರ್ಟ್ ತೊಟ್ಟು ನನ್ನ ಮುಂದೆ ಬರುತ್ತಿಯಾ..? ಮತ್ತೊಮ್ಮೆ ಹುಡುಕಿ ಹೇಳುವ ಆಸೆ ನಿನ್ನ ಕಣ್ಣಿಗೆ ಕಾಣದ ಬೆನ್ನ ಹಿಂದಿನ ಮಚ್ಚೆಯ ಗುರುತನ್ನ...
ಸಂಜೆ ಬಿಗಿ ಅಪ್ಪುಗೆಯ ಜೊತೆ
ರಸ್ತೆಯ ಬದಿ ಹೃದಯಗಳ ಸಂಚಾರ
ನೆನಪಿನ ಪುಟಗಳ ತುಂಬಾ
ಬರೀ ನಿನ್ನದೇ ಹಸ್ತಾಕ್ಷರ..!
ಸಂಜೆಯ ಸಣ್ಣ ವಾಕ್ ಮುಗಿಸಿ ಫುಟ್ಪಾತ್ ನಲ್ಲಿ ನಿಂತು ನಿನ್ನ ಜೊತೆ ಪಾನಿಪುರಿ ತಿನ್ನದಿದ್ದರೆ ಆ ಸಂಜೆಗೆ ಆರ್ಥವೆ ಇರುತ್ತಿರಲಿಲ್ಲ, ಪಾನಿಪುರಿ ಅಂಗಡಿಯವನಿಗಂತೂ ನಾವು ಪರಿಚಿತ ಎಷ್ಟೇ ಜನರ ಆರ್ಡರ್ ಇದ್ದರೂ ನಾನು ಕೇಳುವ ಮುನ್ನವೇ ನಮಗೆ ಸಿದ್ದಮಾಡಿ ಕೊಡುತ್ತಿದ್ದ.. ನೆನಪಿರಬೇಕಲ್ಲವೇ ಒಮ್ಮೆ ಆತ "ಸೂಪರ್ ಜೋಡಿ ಸರ್ ನಿಮ್ಮದು" ಎಂದು ಹೇಳಿದ ಮಾತು ಬೊಗ್ಗಸೆ ಬೆರಗಾಗಿ ಕಣ್ಣು ಕಣ್ಣು ಬಿಟ್ಟು ನಮ್ಮ ಮೂಖ ನಾವೇ ನೋಡಿಕೊಂಡದ್ದು, ಅಂದೇ ಅಲ್ಲವೇ ನಮ್ಮ ಪ್ರೀತಿಯ ಚಿಲುಮೆ ಮತ್ತಷ್ಟು ಹೆಚ್ಚಿದ್ದು, ನಿನ್ನ ಮೂಖದ ಕಾಂತಿ ಆ ಸಂಜೆಯ ಹಾದಿಯಲ್ಲಿ ಬೆಳದಿಂಗಳಂತೆ ಹೊಳೆದಿದ್ದು, ಮರಳಿ ಬರುವಾಗ ಸಡಿಲವಾದ ಅಪ್ಪುಗೆ ಮತ್ತಷ್ಟು ಬಿಗಿಯಾದದ್ದು, ಮತ್ತೆ ಮತ್ತೆ ಅವನ ಮಾತುಗಳೇ ಕಿವಿಗಳಿಗೆ ಪುನಃ ಪುನಃ ಕೇಳಿದಂತೆ ಭಾಸವಾಗಿದ್ದು, ಆತ ಬೇಡವೆಂದರೂ ನೀನೆ ಆತನಿಗೆ 50/- ರೂಪಾಯಿ ಟಿಪ್ಸ್ ಕೊಟ್ಟಿದ್ದು, ರಾತ್ರಿಯೆಲ್ಲ ನಿದ್ದೆ ಇಲ್ಲದೆ ಅವನ ಮಾತನ್ನೇ ಮೆಲಕು ಹಾಕಿದ್ದು, ಪದೇ ಪದೇ ನೀನು ನನಗೆ ಮೆಸೇಜ್ ಮಾಡಿದ್ದು, ಆತನ ಅಂದಿನ ಮಾತಿಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲೋದಿಲ್ಲ ಅನಿಸುತ್ತೆ ಅಲ್ವ.! . ಬಲು ಬೇಗ ಬಂದು ಬಿಡು ಮತ್ತೊಮ್ಮೆ ನಿನ್ನ ಜೊತೆಗೆ ಪಾನಿಪುರಿ ತಿನ್ನಬೇಕು ಆತನ ಬಾಯಲ್ಲೇ ಅದೇ ಮಾತ ನಾ ಕೇಳಬೇಕು.. ಬರುವೆಯ...?
ಬೆಟ್ಟದ ತುದಿಯಲಿ
ಸುಡುವ ಸೂರ್ಯನ ಮುಂದೆ
ತಣ್ಣನೆ ಗಾಳಿಯಲಿ
ನೀ ಕೊಟ್ಟ ಮುತ್ತು
ಮರುಕಳಿಸುವುದೆಂತೋ..?
ಬರುವ ಪ್ರತಿ ಸಂಜೆಗಳನ್ನು ಹಿಯಾಳಿಸುತ್ತೇನೆ ಬೈಯುತ್ತೇನೆ ಬೇಕೆಂದೇ ಮತ್ತೆ ಮತ್ತೆ ನಿನ್ನ ನೆನಪು ಮಾಡಿಕೊಂಡು ಒಬ್ಬನೇ ಈ ಬೆಟ್ಟದ ತುದಿಯಲಿ ಕೂತು ಕಣ್ಣೀರಾಗುತ್ತೇನೆ, ನಿನ್ನ ಮರೆಯುವ ಪ್ರತಿಯೊಂದು ಪ್ರಯತ್ನದಲ್ಲೂ ಸೋಲಿನ ಸರದಾರನಾಗುತ್ತೇನೆ. ನಿನಗೆ ನೆನೆಪಿದಿಯಾ ಎಂದು ಮತ್ತೊಮ್ಮೆ ಕೇಳಲಾರೆ ನಿನಗು ಮನಸ್ಸಿದೆ ಅದಕ್ಕೂ ಮಿಗಿಲಾಗಿ ಇಂತಹ ಎಷ್ಟೋ ಸಂಜೆಗಳ ನೆನಪುಗಳು ನಿನ್ನ ಬಳಿ ಇದ್ದೆ ಇವೆ. ಅಚಾನಕ್ ಆಗಿ ಗಾಳಿಗೆ ಹಾರಿ ಮರದ ಮೇಲೆಲ್ಲೋ ಕೂತ ಆ ನಿನ್ನ ದಾವಣಿಯನ್ನ ಹಿಡಿದು ತಂದು ಕೊಡುವಾಗ ಶುಲ್ಕವಾಗಿ ನಾ ಮರಳಿ ನಿನ್ನಿಂದ ಪಡೆದ ಆ ಮುತ್ತು ಇನ್ನೂ ಹಸಿ ಹಸಿಯಾಗಿ ಕೆನ್ನೆ ಮೇಲಿದೆ.. ಏನೇ ಹೇಳು ಸೂರ್ಯನ ಕೆನ್ನೆಗೆ ಬೆಣ್ಣೆ ತಾಕಿದಹಾಗೆ ನೀ ಕೊಟ್ಟ ಆ ಮುತ್ತು.. ನಿನ್ನ ಮುತ್ತಿಗೆ ಮತ್ತೇರಿ ಅಂದು ಕರಗಿದ್ದು ನಾನ ನೀನಾ ಇಂದಿಗೂ ಅದೊಂದು ಉತ್ತರ ಸಿಗದ ಪ್ರಶ್ನೆಯಾಗೇ ಉಳಿದಿದೆ... ನೀ ಮುತ್ತನಿಡುವಾಗ ಯಾರು ನೋಡಬಾರದೆಂದುಕೊಂಡೆ ನೀ ಮುತ್ತನಿಟ್ಟೆ ಆದರೆ ಬೆಟ್ಟದ ತುದಿಯ ಆಳದಲ್ಲಿ ಮುಳುಗುತಿದ್ದ ಆ ಸೂರ್ಯ ನೋಡಿ ಮರೆಯಾದ.. ನಿಜ ಹೇಳಲಾ ಅವನು ತುಂಬಾ ಪ್ರಾಮಾಣಿಕ ನನ್ನಂತೆಯೇ ಯಾರಿಗೂ ನಮ್ಮ ಮುತ್ತಿನ ವಿಷಯ ಹೇಳದವನು ಆದರೆ ನೀ ಬಿಟ್ಟು ಹೋದ ದಿನದಿಂದ ಒಬ್ಬನೇ ಈ ಬೆಟ್ಟದಲ್ಲಿ ನಾ ಕೂತಾಗ ಆ ಮುಳುಗುವ ಸೂರ್ಯ ನನ್ನ ನೋಡಿ ವ್ಯಂಗ್ಯವಾಗಿ ನಗುತ್ತಾನೆ.. ದಯಮಾಡಿ ಒಮ್ಮೆ ಬಂದುಬಿಡು ಅವನು ನನ್ನ ನೋಡಿ ಹೀಗೆ ನಗದಂತೆ ಆಜ್ಞೆ ಮಾಡು, ಹಾಗೆ ಗಾಳಿಗೆ ಮತ್ತೊಮ್ಮೆ ನಿನ್ನ ದಾವಣಿ ಹಾರಬಿಡು ಹಿಡಿದು ತಂದುಕೊಟ್ಟು ಶುಲ್ಕವಾಗಿ ಮತ್ತೆ ಮತ್ತೆ ಮುತ್ತಾ ಪಡೆವೆ ಬರುವೆಯ..?
?ದೊಡ್ಡಮನಿ.ಎಂ.ಮಂಜು
Monday, 12 March 2012
ಇದು ಕಥೆಯಲ್ಲ ಜೀವನ....
ಮೈಸೂರಿನ ಆಂದೋಲನ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ ನೈಜ್ಯ ಘಟನೆಯ ನನ್ನ ಸಣ್ಣ ಲೇಖನ
ಇದು ಕಥೆಯಲ್ಲ ಜೀವನ....
ಆಕೆ ವಿದ್ಯಾವಂತೆ ಬೆಂಗಳೊರಿನ ಪ್ರತಿಷ್ಠಿತ ಕಂಪನಿ ಒಂದರ ಉದ್ಯೋಗಿ, ಕೆಲವು ವರ್ಷಗಳ ಹಿಂದೇ ಸುಟ್ಟು ಹೋದ ಭಾವನೆಗಳ ಮರೆತು ನೆನಪುಗಳ ಜೊತೆ ಜೀವನ ನಡೆಸುತ್ತಿದ್ದ ಚಿಕ್ಕ ವಯಸ್ಸಿನ ವಿಧುರೆ, ಜೀವನದ ದಾರಿಯಲ್ಲಿ ಹೊಸ ಬೆಳಕ ಕಾಣುವ ಹೊತ್ತಿಗಾಗಲೇ ಅವಳ ಪಾಲಿಗೆ ಕತ್ತಲು ತುಂಬಿ ತುಳುಕುತ್ತಿತ್ತು ಇಂತಹ ಸ್ಥಿತಿಯಲ್ಲೂ ದೃತಿಗೆಡದೆ ಧೈರ್ಯದಿಂದ ಹೆಜ್ಜೆ ಹಾಕುತ್ತಿದ್ದಳು.
ಹೀಗೆ ಕೆಲವು ದಿನಗಳ ಹಿಂದೇ ಇಂಟರ್ನೆಟ್ ಚಾಟಿಂಗ್ ಮುಖಾಂತರ ಬರುಡಾದ ಅವಳ ಬಾಳಲ್ಲಿ ತಂಗಾಳಿಯಂತೆ ಒಬ್ಬ ಪರಿಚಯ ಆದ, ಅವಳ ನೋವುಗಳೆಲ್ಲವನ್ನು ಹಂಚಿಕೊಳ್ಳಲು ಒಬ್ಬ ಗೆಳಯ ಸಿಕ್ಕ ಅವಳ ಎಲ್ಲಾ ಭಾವನೆಗಳಿಗೆ ಸ್ಪಂದಿಸುತ್ತಾ ಹೋದ, ದಿನಂ ಪ್ರತಿ ಅವಳ ಕೆನ್ನೆಯನ್ನು ಸೇರುತ್ತಿದ್ದ ಕಣ್ಣಿರು ನಿಧಾನವಾಗಿ ತನಗೆ ಅರಿವಿಲ್ಲದೆ ಕಣ್ಮರೆಯಾಗಿತ್ತು, ಅವನ ಪರಿಚಯ ತನ್ನನ್ನೇ ತಾನು ನಂಬಲಾರದಷ್ಟು ನಗು, ಸಂತೋಷಗಳನ್ನೂ ಅವಳಿಗೆ ತಂದು ಕೊಟ್ಟಿತು. ಒಂಟಿ ಜೀವ ಒಬ್ಬಂಟಿ ಅನ್ನೋ ಭಾವ ಅವಳಿಂದ ಓಡಿ ಹೋಗಿತ್ತು ಸ್ನೇಹದ ಪ್ರಭಾವವೇ ಅಂತಹದ್ದು ಯಾರನ್ನ ಹೇಗೆ ಯಾವಾಗ ಬೇಕಾದರು ಜೀವಕ್ಕೆ ಹತ್ತಿರ ಮಾಡುತ್ತೆ ಅಲ್ವ ..!
ಬೆಳಗ್ಗಿನ ಗುಡ್ ಮಾರ್ನಿಂಗ್ ಯಿಂದ ರಾತ್ರಿಯ ಗುಡ್ ನೈಟ್ ತನಕ ಅವಳ ಮೊಬೈಲ್ ನಲ್ಲಿ ಅವನ ಮೆಸೇಜ್ ಗಳೆ ತುಂಬಿ ಹೋಗಿದ್ದವು, ಅವನ ಸರಳತೆಗೆ ಇವಳ ಮುಗ್ದತೆ ಎಂದೋ ಸೋತು ಶರಣಾಗಿತ್ತು, ಹೌದು ಅವರಿಬ್ಬರ ಆನ್ಲೈನ್ ಚಾಟಿಂಗ್ ಮುಂದುವರೆದು ಮೊಬೈಲ್ ಸಂದೇಶಗಳ ಗಡಿ ದಾಟಿ ಮೂರು ತಿಂಗಳಲ್ಲೇ ದಿನಕ್ಕೆ 3 ಬಾರಿಯಾದರೂ ಮಾತನಾಡುವಷ್ಟು ಸ್ನೇಹ ಬೆಳೆದಿತ್ತು ಆ ಸ್ನೇಹ ಬರೀ ಸ್ನೇಹವಾಗಿ ಉಳಿದಿರಲಿಲ್ಲ ಎಲ್ಲೋ ಒಂದು ಕಡೆ ಪ್ರೇಮದ ಕಂಪು ಆವರಿಸಿತು ಅತಿದೊಡ್ಡ ಸ್ನೇಹದ ನೆರಳಲ್ಲಿ ಪ್ರೀತಿಯ ಚಿಕ್ಕ ಗಿಡ ಚಿಗುರಿ ಒಲವಿನ ಲತೆ ಅರಳಿ ಹೊಸ ಹೊಸ ಭರವಸೆಯ ಪರಿಮಳ ಹರಡಿತು.
ಆಕೆ ಮತ್ತೆ ಎಲ್ಲದಕ್ಕೂ ಸಿದ್ದಳಾಗಿದ್ದಳು ಧರ್ಮ ಕರ್ಮಗಳ ಗೊಡ್ಡು ಸಂಪ್ರದಾಯ ಮೂಡನಂಬಿಕೆಗಳ ಎದುರು ನಿಂತು ವಿದಾಯ ಹೇಳಲು ತುದಿಗಾಲಲ್ಲಿ ಕಾತುರದಿಂದ ಕಾಯುತ್ತಿದ್ದಳು, ಅದೊಂದು ದಿನ ಅವನಿಂದ ಇವಳಿಗೆ ಕಾಲ್ ಬಂತು " ತಂದೆಗೆ ಹುಷಾರಿಲ್ಲ ಅರೋಗ್ಯ ಕೈ ಕೊಟ್ಟಿದೆ ತುರ್ತಾಗಿ ಅಪರೇಷನ್ ಮಾಡ್ಬೇಕು ಸ್ವಲ್ಪ ಹಣ ಬೇಕಾಗಿತ್ತು ಎಂದೂ ಬಿಕ್ಕಳಿಸುತ್ತ ಆತ ನುಡಿದ " ಹೆಚ್ಚು ಮಾತನಾಡದೆ ಆಕೆ ಆತನ ಬ್ಯಾಂಕ್ ಅಕೌಂಟ್ ನಂಬರ್ ಪಡೆದು ಕೂತಲ್ಲೇ ನೆಟ್ ಬ್ಯಾಂಕಿಂಗ್ ನಿಂದ 10 ಸಾವಿರ ಹಣವನ್ನ ವರ್ಗಾಯಿಸಿ ಅವನಿಗೆ ಕಾಲ್ ಮಾಡಿದಳು
"ಯಾವದಕ್ಕೂ ತಲೆ ಕೆಡಿಸ್ಕೋ ಬೇಡ ಡಿಯರ್ ನಿಮ್ಮ ತಂದೆ ಹುಷಾರ್ ಆಗ್ತಾರೆ ಆದಷ್ಟು ಬೇಗ ಮನೆಯಲ್ಲಿ ನಮ್ಮ ವಿಷಯ ಪ್ರಸ್ತಾಪಿಸುತ್ತೇನೆ ಇದುವರೆಗೂ ನಾನಿನ್ನ ನೋಡಿರೋದು ಕೇವಲ ಫೋಟೋದಲ್ಲಿ, ನಿನ್ನ Exam ಮುಗಿದ ತಕ್ಷಣ ಬಿಡುವು ಮಾಡಿಕೊಂಡು ಬೆಂಗಳೊರಿಗೆ ಬಂದು ಬಿಡು ನಿನಗಾಗಿ ಕಾಯ್ತೀನಿ ಈಗ ಟೆನ್ ಥೌಸಂಡ್ ನಿನ್ನ ಅಕೌಂಟ್ ಗೆ ಹಾಕಿದ್ದೇನೆ ಇನ್ನೂ ಬೇಕಾದಲ್ಲಿ ಸಂಕೋಚ ಇಲ್ಲದೆ ಕೇಳು ಮತ್ತೆ ಸಂಜೆ ಕಾಲ್ ಮಾಡು ಓಕೆ " ಈಕೆಯ ಇಷ್ಟುದ್ದ ಮಾತುಗಳಿಗೆ ಅವನು ಹೇಳಿದ್ದು ಕೇವಲ "ಓಕೆ",,,,,... ಬಹುಷಃ ಅದು ಅವಳಿಗೆ ಅವನ ಕೊನೆಯ ಮಾತಾಗಿತ್ತು ಅನ್ನುವ ಯಾವುದೇ ಸುಳಿವು ಅವಳಿಗೆ ಇರಲಿಲ್ಲ...!
ಹೌದು.... ಅವನು ಕೇವಲ ಹಣಕ್ಕಾಗಿ ಪ್ರೀತಿಯ ಬಲೆ ಬೀಸಿದ್ದ ಸಾಂತ್ವಾನದ ಮುಖವಾಡ ತೊಟ್ಟು ಅವಳನ್ನ ನಂಬಿಸಿದ್ದ ಇಲ್ಲಸಲ್ಲದ ಒಲವ ಕತೆಗಳನ್ನು ಕಟ್ಟಿದ್ದ ಎಲ್ಲದಕ್ಕೂ ಹೆಚ್ಚಾಗಿ ಅವಳ ಭಾವನೆಗಳ ಹೊಲದಲ್ಲಿ ಪ್ರೀತಿಯ ಬೀಜಬಿತ್ತಿ ಮೋಸದ ಫಲವ ಕೊಟ್ಟು ಹೆಸರಿಲ್ಲದೆ ಹೋದ.... ಅವನನ್ನ ಹಿಡಿಯುವುದು ಅವಳಿಗೆ ದೊಡ್ಡ ವಿಷಯವಾಗಿರಲಿಲ್ಲ ಅದರಿಂದ ಯಾವುದೇ ಪ್ರಯೋಜನವೂ ಅವಳಿಗೆ ಬೇಕಾಗಿರಿಲಿಲ್ಲ, ಜೀವನ ಅವಳಿಗೆ ಈಗ ಮತ್ತೊಮ್ಮೆ ಮರೆಯಲಾಗದ ಪಾಠ ಕಲಿಸಿದೆ, ಈಗ ಅವಳೊಂದಿಗೆ ಹೇಳಿಕೊಳ್ಳಲು ಉಳಿದಿರುವುದು ಅವಳ ಅವೇ ಕಣ್ಣಿರು ಮಾತ್ರ, ನಂಬಿಕೆ ಇರಬೇಕು ಆದರೆ ಅತಿನಂಬಿಕೆ ಮೋಸಕ್ಕೆ ಕಾರಣ.
ಪ್ರೀತಿಯ ಹೆಸರಲ್ಲಿ ನಂಬಿದವರನ್ನು ಮೋಸ ಮಾಡೋದು ಎಷ್ಟು ಸರಿ...?
ಅವಳ ಧೈರ್ಯವೇ ಅವಳ ಬೆನ್ನೆಲುಬು, ಅಪರಿಚಿತರ ಆಶ್ರಯಕ್ಕೆ ಆಸೆ ಪಡುವ ಮುಗ್ಧ ಹೆಣ್ಣಿನ ಕಣ್ಣಿರು ಎಂದೂ ಕೊನೆಯಾಗದು.ಒಂದು ಬಾರಿ ಎಡವುದಕ್ಕೆ ಮುಂಚೆಯೇ ಎಚ್ಚೆತ್ತರೆ ಈ ಅನಾಹುತಗಳಿಗೆ ದಾರಿಯಾಗದು. ಒಂದು ಮಾತ್ರ ಸತ್ಯ. ಅವಳ ಕಥೆ ಕೇಳಬೇಕಾದರೆ ನನಗೆ ತಿಳಿದಿದ್ದು ಇಷ್ಟೇ, ಅವಳು ಇನ್ನೊಬ್ಬನ ಆಶ್ರಯ ಪಡೆಯ ಬೇಕೆನ್ನೋದನ್ನ ಬಿಟ್ಟು, ಅವಳ ಮೊದಲ ಜೀವನದ ಕಡೆ ಗಮನ ಕೊಡಬಹುದು, ನನ್ನ ಆತ್ಮಿಯ ಸ್ನೇಹಿತ ಸ್ನೇಹಿತೆಯರಿಗೆ ನಾನು ಹೇಳುವುದಿಷ್ಟೇ, ನೊಂದ ಜೀವಗಳನ್ನು ಮತ್ತೆ ನೋಯಿಸ ಬೇಡಿ, ಪ್ರೀತಿ ಹೆಸರಲ್ಲಿ ಮೋಸ ಮಾಡಬೇಡಿ.
ಎಲ್ಲದಕ್ಕೂ ಸಾವೆಂಬುದೇ ಕೊನೆಯಲ್ಲ ಬದುಕಿ ನಿಮ್ಮ ಜೀವನದಲ್ಲಿ ಸಾಧಿಸಿ ತೋರಿಸಿ (ಗೆಳತಿ ಭಾನುಮತಿ)
?ಮಂಜು,ಎಂ,ದೊಡ್ಡಮನಿ
(ಮರೀಚಿಕೆ)
Monday, 27 February 2012
Tuesday, 3 January 2012
ನವಿಲ್ ಹುಡುಗಿ...!
![]() |
ನಿದ್ದೆ ಕಣ್ಣ ಮಂಪರಿನಲ್ಲಿ
ಮೃದುವಾಗಿ ತಲೆಸವರಿ
ಮುದ್ದು ಮಗುವಿನ ಮಂದಹಾಸವ
ಬೆಳದಿಂಗಳಂತೆ ಚಲ್ಲಿ
ದಾರಿ ತೋರಿದ ಸ್ನೇಹವೇ
ನೀನೆಂದು ಅನಂತವಾಗಿರು...!
|
ಈ ಸ್ನೇಹ ಯಾರಿಂದ ಯಾವಾಗ ಎಲ್ಲಿ ಹೇಗೆ ಶುರುವಾಗುತ್ತೆ ಅಂತ ಯಾರಿಗೂ ಗೊತ್ತಿರೋದಿಲ್ಲ .... ಆ ಸ್ನೇಹದ ಬಗ್ಗೆ ಯಾರು ಎಷ್ಟೇ ಬರೆದರೂ ಕಮ್ಮಿ ಅನಿಸುತ್ತೆ ... ಕಷ್ಟ ದುಖಗಳಲ್ಲಿ ಸಮನಾಗಿ ಹಚ್ಹಿಕೊಂಡು ನಮ್ಮನ್ನು ಕಾಪಾಡುವ ಈ ಸ್ನೇಹಕ್ಕೆ ಜಾತಿ, ಧರ್ಮ, ದೊಡ್ಡವರು ಚಿಕ್ಕವರು ಅಲ್ಲದೆ ಹುಡುಗ ಹುಡುಗಿ ಅನ್ನೋ ಯಾವುದೇ ಭೇದವಿಲ್ಲ, ಎಲ್ಲೋ ಇದ್ದವರನ್ನ ಎಲ್ಲೋ ಕೂಡಿಸಿ ಇನ್ನೆಲ್ಲೋ ಜೊತೆ ಮಾಡಿ ಕೈಗೆ ಕೈ ಜೋಡಿಸುವ ಈ ಸ್ನೇಹ ಎಂದಿಗೂ ಅಮರ, ಅನಂತ ಅಲ್ವ...?
ಕೆಲವು ದಿನಗಳ ಹಿಂದೇ.........
ಆಕೆ ಯಾರೆಂದು ನನಗೆ ಗೊತ್ತಿರಲಿಲ್ಲ..... ನನ್ನ ಲೇಖನವನ್ನ ಓದಿ ಒಮ್ಮೆ ನನಗೆ ಕಾಲ್ ಮಾಡಿದ್ದಳು....ಇಂತಹ ದೂರವಾಣಿ ಕರೆಗಳು ನನ್ನ ಮೊಬೈಲ್ ಗೆ ಸರ್ವೇ ಸಾಮಾನ್ಯ, ಕಾಲ್ ಮಾಡಿದ ಆ ಹುಡುಗಿ ನನ್ನ ಅಪರಿಚಿತ ದ್ವನಿಯನ್ನು ಪರಿಚಿತ ಮಾಡಿಕೊಳ್ಳಲು ಎಲ್ಲರೂ ಮಾತನಾಡುವಂತೆ ಮೊದಲು ನನ್ನ ಬರವಣಿಗೆಯ ಬಗ್ಗೆ ಒಂದಿಷ್ಟು ಮಾತನಾಡಿದಳು, ಅದು ಮೊದಲ ಸಲ ಆದ್ದರಿಂದ ಅವಳ ಮಾತುಗಳಲ್ಲಿ ಅಂಜಿಕೆ ಇತ್ತು.... ತಡವರಿಸಿಕೊಂಡು ಮಾತಾಡುತ್ತಿದ್ದವಳಿಗೆ ನಾನು ಸಹ ಉತ್ಸಾಹದಲ್ಲೇ ಪ್ರತಿಕ್ರಿಯಿಸುತ್ತಿ ದ್ದೇ ... ಏಕೆಂದರೆ ಪರಿಚಯವಿಲ್ಲದ ವ್ಯಕ್ತಿಯೊಂದಿಗೆ ಮಾತಾಡುವುದು ಯಾರಿಗಾದರು ಸ್ವಲ್ಪ ಕಷ್ಟಸಾದ್ಯವೇ.. ಅದರಲ್ಲೂ ಹುಡುಗಿಯರಿಗೆ ಸ್ವಲ್ಪ ಅಂಜಿಕೆ ಇದ್ದೆ ಇರುತ್ತದೆ ಅಲ್ವ ..? ಆ ಹುಡುಗಿ ಮಾತನಾಡುತ್ತಲೇ ಇದ್ದಳು, ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಕ್ಕಿ ಆಫೀಸಿಗೆ ಬಂದದ್ದು ತಡವಾಗಿತ್ತು ಅಲ್ಲದೆ ಎಂದೂ ಇಲ್ಲದ ಎಲ್ಲಾ ಕೆಲಸಗಳು ನನ್ನ ಟೇಬಲ್ ಮೇಲೆ ಬಂದು ಬಿದ್ದಿದ್ದವು, ಇತ್ತ ಈ ಹುಡುಗಿಯ ಜೊತೆ ಮಾತಾಡುವುದೋ ಅತ್ತ ಕೆಲಸವನ್ನು ಕೈಗೆ ಎತ್ತಿಕೊಳ್ಳುವುದೋ ಎಂಬ ಚಿಂತೆ ನನ್ನ ತಲೆಯ ಸುತ್ತ ಸುತ್ತುತಿತ್ತು ... ಆ ಹುಡುಗಿ ಮಾತಾಡುತ್ತಿರುವ ಉತ್ಸಾಹ ನೋಡಿದರೆ ಇವತ್ತು ಪೂರ್ತಿ ಫೋನ್ ಕಟ್ ಮಾಡುವುದಿಲ್ಲ ಅನ್ನೋ ಪಣತೊಟ್ಟಂತಿತ್ತು ನನಗೂ ಬೇರೆ ವಿಧಿ ಇರಲಿಲ್ಲ.. ನಾನು ಅವಳ ಜೊತೆ ಮಾತಿಗಿಳಿದೆ.. ನನ್ನ ಮುಂದೆ ಹಾಗೂ ಹಿಂದೇ ನನ್ನನ್ನೇ ಸೆರೆ ಹಿಡಿಯುತ್ತಿದ್ದಾ ಕ್ಯಾಮರಗಳಲ್ಲಿ ಒಳಗಡೆ ಕೂತು ನನ್ನ ಬಾಸ್ ನನ್ನನ್ನು ಕಾರ್ಟುನ್ ಶೋ ಥರ ನೋಡುತ್ತಲೇ ಇದ್ದರೂ ಅನಿಸುತ್ತೆ, ಅವರಿಗೆ ಕೆಲಸಗಾರರನ್ನು ಗಮನಿಸುವುದೇ ಒಂದು ಕೆಲಸ ನನಗೆ ಅದ್ಯಾವುದರ ಭಯ-ಬಂಧ ಇರಲಿಲ್ಲ ಸುಮ್ಮನೆ ಮಾತನಾಡುತ್ತಲೇ ಇದ್ದೆ.... ಸುಮಾರು ಹೊತ್ತು ಮಾತನಾಡಿದ ನಂತರ ವಾಸ್ತವದ ಅರಿವಾಗಿ ನಾನೇ ಮತ್ತೆ ಮಾತನಾಡೋಣ ಬಿಡುವಿನವೇಳೆ ಎಂದೂ ಹೇಳಿ ಹೇಗೋ ತಪ್ಪಿಸಿಕೊಂಡೆ.....
![]() |
ಕೇಳುವವರ್ಯಾರು ಸುಡು ಬಿಸಿಲಲಿ
ಗುನುಗುವ ಒಂಟಿ ಹಕ್ಕಿಯ ಹಾಡು ..!
ಕಂಡರೂ ಕಾಣದಂತೆ ಸುಮ್ಮನಾದರು
ನಿನ್ನ ನಗೆಯ ಹಿಂದಿನ ನೋವಿನಪಾಡು ...!
|
ಆ ಹುಡುಗಿ ಪರಿಚಯವಾದ ಕೇವಲ ಮೂರು ದಿನಗಳಲ್ಲೇ ಅದೆಷ್ಟು ಹಚ್ಚಿಕೊಂಡಿದ್ದಳು ಅಂದರೆ ಆಕೆಯ ಕಾಲ್ ದಿನಕ್ಕೆ ಒಂದಿಂತು ಬರಬರುತ್ತಾ ಅದು ಮೂರಾಯ್ತು.. ಒಂದು ದಿನ ತನ್ನ ಜೀವನದ ಬಗ್ಗೆ ತಾನು ಪಟ್ಟ ಕಷ್ಟ ಸುಖಗಳ ಬಗ್ಗೆ ಜೀವನ ಕಲಿಸಿದ ಪಾಠಗಳ ಬಗ್ಗೆ ನನ್ನಲ್ಲಿ ಹೇಳಿಕೊಂಡಳು, ಹೇಳುವಾಗ ಎಲ್ಲೋ ಒಂದಿಷ್ಟು ಬಿಕ್ಕಳಿಸಿದಳು, ಅತ್ತಳು ನನ್ನ ಸಂತ್ವಾನದ ಮಾತುಗಳು ಮನಸಿಗೆ ಹತ್ತಿರವಾದಂತೆ ನಗುತ್ತಲೇ ಮತ್ತೆ ಮಾತು ಮುಂದುವರೆಸಿದಳು, ಹೌದು ಅವಳದು ತುಂಬಾ ಮುಗ್ದತೆಯ ಸ್ವಭಾವ, ಸ್ನೇಹವನ್ನೇ ನಂಬದ ಸ್ನೇಹಿತರೆ ಇಲ್ಲದ ಜೀವನ ಅವಳದು..! ಈಗಲೂ ಅಷ್ಟೇ ಫೇಸ್ ಬುಕ್ ನಲ್ಲಿ ಆ ಹುಡುಗಿಗೆ ಇರುವ ಸ್ನೇಹಿತರ ಪಟ್ಟಿ ಮಾಡಿದರೆ ನಿಮಗೆ ಸಿಗುವುದು ಕೇವಲ ನಾಲ್ಕೈದು ಪ್ರೊಫೈಲ್ ಗಳು ಮಾತ್ರ, ಮನುಷ್ಯರನ್ನು ಬಿಡಿ ಆಕೆ ತನ್ನ ಮೇಲೆ ತನಗಿಂತ ಹೆಚ್ಚು ಕಣ್ಣಿಗೆ ಕಾಣದ ಗುಡಿ ಗುಂಡಾರಗಳಲ್ಲಿರುವ ಕಲ್ಲು ದೇವರುಗಳನ್ನೇ ನಂಬುತ್ತಿದ್ದಳು, ಆ ನಂಬಿಕೆಯ ಬೆನ್ನಲ್ಲೇ ಅಗಾದವಾದ ಭಕ್ತಿ ಕೂಡ ಇತ್ತು, ಆ ಪುಟ್ಟ ಹೃದಯದ ನಗುವಲಿ ಅದೆಷ್ಟು ದೊಡ್ಡ ದೊಡ್ಡ ನೋವುಗಳು...?
ಕೆಲವು ದಿನದ ನಂತರ ಮತ್ತೆ ಕಾಲ್ ಮಾಡಿ ಕೇಳಿದಳು ಮಂಜು I want to meet you ಯಾವಾಗ ಸಿಗ್ತಿಯಾ..? ನನಗೆ ಸ್ವಲ್ಪ ಕಷ್ಟವೇ, ಸಮಯ ಇರೋದಿಲ್ಲ ನೋಡೋಣ ಆ ಗಳಿಗೆ ಬಂದರೆ ಸಿಗೋಣ ಅಂತ ದೊಡ್ಡದಾಗಿ ಹೇಳಿದ್ದೆ.. ಅವಳದು ಮೊಂಡತನ ಜಾಸ್ತಿ ನನ್ನಂತೆಯೇ.... ಸಿಗಲೇ ಬೇಕು ಇದೇ ವಾರದಲ್ಲಿ ಅನ್ನೋ ಹಠ, ನಾನು ಒಪ್ಪಬೇಕಾಯಿತು ಸರಿ ಸಿಗೋಣ ಆದರೆ ಎಲ್ಲಿ..? ಹೇಗೆ..? ಯಾವಾಗ..? ಅಂತೆಲ್ಲ ಕೇಳಿದೆ ಅವಳು ಆಗಲೇ ಎಲ್ಲವನ್ನು ಪ್ಲಾನ್ ಮಾಡಿಕೊಂಡೆ ನನಗೆ ಕಾಲ್ ಮಾಡಿದ್ದಳು ಅನಿಸುತ್ತೆ ಸಿಗುವ ಸ್ಥಳ ಮತ್ತು ಸಮಯ ಹೇಳಿಬಿಟ್ಟಳು... ನಾನು ಆ ಕ್ಷಣಕ್ಕೆ ಹ್ಮಂ ಅಂದು ಸುಮ್ಮನಾದೆ. ಆಕೆ ಬಿಡಬೇಕಲ್ಲಾ.....
ಹ್ಮಂ ನನ್ನ ಆಕೆ ಬರ ಹೇಳಿದ್ದು ಯಾವುದೇ ಕಾಫಿ ಡೇ, ಶಾಪಿಂಗ್ ಮಾಲ್ ಹೋಟೆಲ್ ಗಳಿಗಲ್ಲ ಒಂದು ದೇವಸ್ಥಾನಕ್ಕೆ.... ಹುಡುಗಿ ಕರೆದ ತಕ್ಷಣ ಹೋಗುವ ಜಾಯಿಮಾನದವನಲ್ಲ ಆದರು ತುಂಬಾ ಯೋಚಿಸಿ ಅಲ್ಲಿಗೆ ಹೋಗಲು ನಿರ್ಧರಿಸಿದ್ದೆ ಅಲ್ಲದೆ ನನಗೆ ಹತ್ತಿರದ ಸ್ಥಳ ಮತ್ತು ಇಷ್ಟವಾದ ಸ್ಥಳ ಅದಾಗಿತ್ತು, ಅವಳು ಹೇಳಿದ ದಿನ ಬಂತು ಲೆಕ್ಕವಿಲ್ಲದಷ್ಟು ಅವಳ ಕರೆಗಳು ಅಂದು, "ಏನೇ ಆಗ್ಲಿ ನೀ ಬರಲೇಬೇಕು" ಅನ್ನೊ ಅವಳ ಹಠ... ಅವಳಿಗೂ ನನಗೂ ಅದು ಮೊದಲ ಭೇಟಿ....!
3 ವರ್ಷ ಅವಧಿಯ ನನ್ನ ಆನ್ಲೈನ್ ಲೈಫ್ ನಲ್ಲಿ ಅಂದರೆ ಇಲ್ಲಿಯವರೆಗೂ ನಾನು ಅದೆಷ್ಟೋ ಸ್ನೇಹಿತರನ್ನ ಭೇಟಿಯಾಗಿದ್ದೇನೆ ಮಾತನಾಡಿಸಿದ್ದೇನೆ, ಇನ್ನೂ ಹೆಚ್ಚು ಅಂದ್ರೆ ಅವರ ಪ್ರೀತಿಯ ಆಹ್ವಾನಕ್ಕೆ ಅವರವರ ಮೆನೆಗೆ ಹೋಗಿದ್ದೇನೆ ಮಧುವೆಗಳಿಗೆ ಹೋಗಿದ್ದೇನೆ ಜನ್ಮದಿನದ ಪಾರ್ಟಿಗಳಿಗೂ ಹೋಗಿದ್ದೇನೆ ಅವರ ಮನೆಯವರೊಂದಿಗೆ ಮನೆಯ ಮಗನಾಗಿದ್ದೇನೆ ಖುಷಿ ಹಂಚಿದ್ದೇನೆ ಅಷ್ಟೇ ಖುಷಿ ಪಟ್ಟಿದ್ದೇನೆ... ಆದರೆ ಅಂತ ಎಲ್ಲಾ ಖುಷಿಗಳನ್ನು ಒಮ್ಮೆಲೇ ತಂದುಕೊಟ್ಟದ್ದು ಆಕೆಯ ಭರ್ಜರಿ ಭೇಟಿ... ಎಲ್ಲವನ್ನು ಮೀರಿ ನಿಂತ ಸ್ನೇಹದ ಅತಿ ಮಧುರ ಕ್ಷಣಗಳವು... ..
ಅವಳ ನನ್ನ ಸ್ನೇಹ ಹೇಗೆ ಅಂದ್ರೆ ವಿ.ರವಿಂದ್ರನ್ ಅವರ ಒಂದು ಫಿಲ್ಮ್ ಇದೇ "ಹೂ" ಅಂತ ಅದ್ರಲ್ಲಿ ಬರೋ ಪಾತ್ರಗಳ ಥರ....ನಮ್ಮ ಸ್ನೇಹಕ್ಕೆ ವರ್ಷಕಳೆದಿದೆ ಇಂದಿಗೂ ಜೊತೆಗಿದ್ದೇವೆ ಅದೇ ಸ್ನೇಹ ಅದೇ ಮನಸು ಅದೇ ಮಾತು ಎಲ್ಲದರಲ್ಲೂ ಒಂದೇ ಟೆಸ್ಟು...ಫ್ರೆಂಡ್ ಅಂದ್ರೆ ಹಾಗಿರಬೇಕು ಅಲ್ವ...?
![]() |
| "ನಿನ್ನ ಜೀವನದ ಪ್ರತಿಯೊಂದು ಹೆಜ್ಜೆಯು ಹೂವಿನ ದಾರಿಯಿಂದ ಕೂಡಿರಲಿ, ಜನ್ಮದಿನದ ಶುಭಾಶಯಗಳು" |
ಹ್ಮಂ ಹೇಳೋದು ಮರೆತಿದ್ದೆ ನನಗೆ ನವಿಲ ಗರಿ ಅಂದ್ರೆ ತುಂಬಾ ಇಷ್ಟ ಒನ್ ಟೈಮ್ ನಂದುಗೆ ಹೇಳಿದ್ದೆ ಅವಳು ಹುಡುಕೊಂಡು ನನಗಾಗಿ ಎರಡು ನಾವಿಲ್ ಗರಿ ತಂದು ಕೊಟ್ಟಿದ್ಲು ಈಗ್ಲೂ ಅವು ಹಾಗೆ ಇವೆ ಅವಳ ನಗುವಿನ ಜೊತೆಗೆ.... ಅಲ್ದೆ ಅವಳು ನವಿಲ ಥರಾನೆ ತುಂಬಾ ಚನ್ನಾಗಿ ಡ್ಯಾನ್ಸ್ ಮಾಡ್ತಾಳೆ.... ಅದ್ಕೆ ನಾ ನವಿಲ್ ಹುಡುಗಿ ಅನ್ನೋದು... ನಾನು ಒಂದೆರಡು ಟೈಮ್ ಜೊತೆಗೆ ಸ್ಟೆಪ್ ಹಾಕಿದಿನಿ..... !
ನಿನ್ನ ಕಂಗಳ ಕಾಂತಿಯ
ಹೊಳಪನ್ನೇ ಹೋಲುವ ಆ ಗರಿಗಳು
ಬೆಳದಿಂಗಳ ಬೆಳಕಲಿ ಇಂದಿಗೂ
ಮಿನುಗುತ್ತಿವೆ ಹೃದಯದ ಕೋಣೆಯ
ಸ್ನೇಹದ ಕಿಟಕಿಯಲಿ...!
"ಸ್ನೇಹವೇ ಅನಂತ ಸ್ನೇಹವೇ ಶಾಶ್ವತ "
~$ಮರೀಚಿಕೆ$~
ದೊಡ್ಡಮನಿ.ಮಂಜು?
+919742495837
Tuesday, 6 December 2011
Why this Facebook ri....
ವೈ ದಿಸ್ ಕೊಲವೇರಿ ಹಾಡಿನ ಟ್ಯೂನ್ ಗೆ ಕನ್ನಡ ಸಾಹಿತ್ಯ.....
ಫ್ರೆಂಡ್ಸ್ ಇದು ನನ್ನ ಮೊದಲ ಪ್ರಯತ್ನ... ಸಾಹಿತ್ಯ ಮತ್ತು ಹಿನ್ನಲೆಗಾಯನ ನಂದೇ (ಮಂಜು.ಎಂ.ದೊಡ್ಡಮನಿ) ನನಗೆ ಹಾಡೋಕೆ ಬರೋದಿಲ್ಲ ಆದ್ರು ಟ್ರೈ ಮಾಡಿದಿನಿ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ.....
~$ಮರೀಚಿಕೆ$~
ಫ್ರೆಂಡ್ಸ್ ಇದು ನನ್ನ ಮೊದಲ ಪ್ರಯತ್ನ... ಸಾಹಿತ್ಯ ಮತ್ತು ಹಿನ್ನಲೆಗಾಯನ ನಂದೇ (ಮಂಜು.ಎಂ.ದೊಡ್ಡಮನಿ) ನನಗೆ ಹಾಡೋಕೆ ಬರೋದಿಲ್ಲ ಆದ್ರು ಟ್ರೈ ಮಾಡಿದಿನಿ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ.....
~$ಮರೀಚಿಕೆ$~
Thursday, 22 September 2011
"ನೆಲವ ತಬ್ಬುವ ಕಣ್ಣೀರು ಕಣ್ಣಿಗಲ್ಲ ಅದು ಎಂದಿಗೂ ನೆಲಕ್ಕೆ"
ನಂಬಲು ಆಗುತ್ತಿಲ್ಲ ಒಂದೇ ಒಂದುವಾರದಲ್ಲಿ ಏನೆಲ್ಲ ಆಗಿ ಹೋಯಿತು ನನ್ನ ಜೀವನದಲ್ಲಿ , ಎಲ್ಲಾ ಒಂದು ಕೆಟ್ಟ ಕನಸು ಅಂದು ಕೊಂಡು ನಿದ್ದೆಯಿಂದ ಎದ್ದು ಬಿಡೋಣ ಅಂತ ಅನಿಸುತ್ತೆ ಅಜ್ಜಿ, ಆದರೆ ಅದೆಲ್ಲವೂ ವಾಸ್ತವ ಅನಿಸಿದಾಗ ಆದ ನೋವು ಅಷ್ಟಿಷ್ಟಲ್ಲ . ಅಷ್ಟೊಂದು ಅವಸರವೆನಿತ್ತು ಅಜ್ಜಿ ಒಂದು ಮಾತು ಹೇಳದೆ ನಿದ್ರೆಯಿಂದ ಚಿರ ನಿದ್ರೆಗೆ ಜಾರುವಷ್ಟು...!
ಹೇಳದೆ ಹೋದೆ ನೀ ಯಾರಿಗೂ
ನಿದ್ರೆಗೂ ಚಿರ ನಿದ್ರೆಗೂ
ಇರುವ ಅಂತರವ
ತಿಳಿಸುವ ನೆಪದಲ್ಲಿ
ತಿರುಗಿ ಬಾರದ ಊರಿಗೆ..!
(My grand mother )
ಅಪ್ಪ ಕೈಬಿಟ್ಟಾಗ ಜೀವನಕ್ಕೆ ಹೆದರಲಿಲ್ಲ, ಮಾಮ ದೂರಾದಾಗ ಅತಿ ದುಃಖದಲ್ಲಿ ಮುಳುಗಲಿಲ್ಲ, ಕೆಲಸವಿಲ್ಲದೇ ಕೆಲಸಕ್ಕಾಗಿ ಅಲೆಯುವಾಗ ವಿಚಲಿತನಾಗಲಿಲ್ಲ ಆದರೆ ಅಂದು ನಡು ರಾತ್ರಿ ಬಂದ ನೀ ತಿರುಗಿ ಬಾರದ ದಾರಿಯಲ್ಲಿ ಒಬ್ಬಳೇ ಹೋದೆ ಅನ್ನೋ ಒಂದು ಭಯಂಕರ ಫೋನ್ ಕಾಲ್ ಗೆ ನಾ ಕಟ್ಟಿದ್ದ ಎಲ್ಲಾ ಕನಸುಗಳು ಆಸೆಗಳು ನನ್ನಲ್ಲಿನ ಆಸಕ್ತಿ ಉತ್ಸಾಹಗಳು ಕ್ಷಣಾರ್ಧದಲ್ಲೇ ತಡೆಯಲಾಗದ ನೋವಿನ ಸುನಾಮಿಯಲ್ಲಿ ಕೊಚ್ಚಿ ಹೋದವು..! ಎಂದೋ ಆಗುವ ಪ್ರಪಂಚದ ಅಂತ್ಯ ಆಗಬಾರದೇಕೆ ಈ ಕ್ಷಣವೇ ಅಂತ ಅನಿಸಿದ್ದು ವಿಜಯನಗರ ಬಸ್ ಸ್ಟಾಪ್ ನಲ್ಲಿ ರಾತ್ರಿ ಒಂದು ಗಂಟೆಗೆ ಮಜೆಸ್ಟಿಕ್ ಬಸ್ ಗಾಗಿ ಕಾದು ಕೂತಾಗ....!
ಉಕ್ಕಿ ಬರುವ ದುಃಖವ
ತಡೆದು ಕೂತೆ ನಾನು
ನಿನ್ನ ನೋಡೋ ಅವಸರದಿ
ಎಷ್ಟು ಮೈಲಿಗಳ ದೂರದಲ್ಲಿ....!
ಇನ್ನೂ ನೆನಪಿದೆ ಅಜ್ಜಿ ನನಗಾಗಿ ನೀ ಪಟ್ಟ ಕಷ್ಟ ಸುಡೋ ಬಿಸಿಲಲ್ಲಿ ನಡು ರಾತ್ರಿ ಕತ್ತಲಲ್ಲಿ ಅದು ಎಷ್ಟು ಬಾರಿ ನನ್ನ ಹೊತ್ತುಕೊಂಡು ಆಸ್ಪತ್ರೆಯ ಮೆಟ್ಟಿಲ್ಲು ಹತ್ತಿದ್ದಿ, ಅದೆಷ್ಟು ದೇವರಿಗೆ ಹರಕೆಗಳನ್ನೂ ಹೊತ್ತು ಪೂಜೆ ಸಲ್ಲಿಸಿದ್ದಿ, ಈಗ್ಲೂ ನೀನಿಲ್ಲ ಅಂತ ಅಂದುಕೊಂಡರೆ ತುಂಬಾ ನೋವಾಗುತ್ತೆ, ಸಮುದ್ರದ ಮಧ್ಯೆ ನಾ ನಿಂತ ಹಡಗು ಧಿಡಿರನೆ ಮುಳುಗಿ ಹೋದರೆ ದಡ ತಲುಪುವುದಾದರೂ ಹೇಗೆ..? ನೀನೆಲ್ಲೋ ಇದ್ದೀಯ ನನ್ನ ಕಾಯುತ್ತಿದ್ದಿಯ, ಹುಟ್ಟು ಹಾಕಿ ತಲುಪಿಸಬೇಕಾದ ದಡಕ್ಕೆ ನನ್ನನ್ನು ತಲುಪಿಸುತ್ತಿಯಾ ಅನ್ನೋ ನಂಬಿಕೆ ನನಗೆ ಅಂದಿಗೂ ಇಂದಿಗೂ ಇದ್ದೆ ಇದೇ..!
ನೀನಿರುವೆ ಅನ್ನೋ
ಕಹಿ ನಂಬಿಕೆ ಸಾಕು
ಆಳೆತ್ತರದ ಅಲೆಗಳ ದಾಟಿ
ಕನಸುಗಳ ದೋಣಿ ಮುಳುಗದಂತೆ
ನಾವಿಕನಾಗಿ ದಡ ಸೇರುವೆ...!
ನೀನಿದ್ದಗೆಲ್ಲ ಹೇಳ್ತಾ ಇದ್ದೆ ಅಜ್ಜಿ "ಪ್ರತಿ ದಿನ ದೇವರ ಫೋಟೋಗೆ ಕೈ ಮುಗಿ ಅಂತ ಬಟ್ ಈಗ ಅಮ್ಮ ಹೇಳ್ತಾಳೆ ಅಜ್ಜಿ ಫೋಟೋಗೆ ಕೈ ಮುಗಿದು ಹೋಗು ಅಂತ" ಕಾಲಾಯ ತಸ್ಮೈ ನಮಃ ಅನ್ನೋದು ಇದಕ್ಕೇನಾ...? ಮಮತೆ ಪ್ರೀತಿ ವಾತ್ಸಲ್ಯ ಸಂಕಟ ನೋವು ಕಣ್ಣಿರು ದುಃಖ ಇವುಗಳ ಮೌಲ್ಯ ಈಗ ನನಗೆ ಅರಿವಾಗಿದೆ ಅಜ್ಜಿ, ದುಃಖದಲ್ಲಿ ಇದ್ದ ನನ್ನ ಎಲ್ಲಾ ಸ್ನೇಹಿತರಿಗೂ ನಾನು ಸಾಂತ್ವಾನ ಈಜಿ ಆಗಿ ಹೇಳ್ತಾ ಇದ್ದೆ ಬಟ್ ಅದನ್ನ ಅನುಭವಿದಾಗಲೇ ನನಗೆ ಗೊತ್ತಾಗಿದ್ದು "ನೆಲವ ತಬ್ಬುವ ಕಣ್ಣೀರು ಕಣ್ಣಿಗಲ್ಲ ಅದು ಎಂದಿಗೂ ನೆಲಕ್ಕೆ" ಅಂತ.
ನೀನಿಲ್ಲದ ಮನೆಯಲ್ಲಿ
ನಿಲ್ಲಲಾರದ ಕಣ್ಣಿರು
ತುತ್ತು ತುತ್ತಿಗೂ ನಿನ್ನ ನೆನಪು
ಬಂದು ಹೋಗು ಅಜ್ಜಿ ಮತ್ತೆ ಒಮ್ಮೆ
ಮಡಿಲಲ್ಲಿ ನಾ ಮಲಗಿ ನಿದ್ರಿಸುವೆ...!
ಪ್ರೀತಿಯಿಂದ
ದೊಡ್ಡಮನಿ.ಎಂ.ಮಂಜುನಾಥ
~$ಮರೀಚಿಕೆ$~
Thursday, 8 September 2011
"ದಚ್ಚು"
ತುಂಬಾ ದಿನಗಳಾಗಿತ್ತು ಬರೆದು...! ನನ್ನ ಕವನ ಸಂಕಲನ ಬಿಡುಗಡೆಯ ಖುಷಿಯಲ್ಲಿ ಕಳೆದು ಹೋಗಿದ್ದೆ ಮತ್ತೆ ಈಗ ಬೇಡವೆಂದರೂ ಮನಸ್ಸು ಬರೆಯುವಂತೆ ಒತ್ತಯಿಸುತ್ತಿದ್ದೆ ಏನನ್ನ ಬರೆಯಲಿ ....? ಬೆಂಗಳೊರಿನ ಬ್ಯುಸಿ ಲೈಫ್ ನಲ್ಲಿ...! ಆದರು ಬರೆಯ ಹೊರಟ್ಟಿದ್ದೇನೆ ಮತ್ತೊಂದು ಹೊಸ ಬ್ಲಾಗ್ ನಲ್ಲಿ ಬನ್ನಿ ಒಮ್ಮೆ ಭೇಟಿ ಕೊಡಿ ನನ್ನ "ದಚ್ಚು" ಅನ್ನೋ ಬ್ಲಾಗ್ ಗೆ...
"ದಚ್ಚು"ವಿಗಾಗಿ ಈ ಕೆಳಗಿನ ಲಿಂಕ್ ನೋಡಿ
http://dacchudoddamani.blogspot.com
ಪ್ರೀತಿಯಿಂದ
~$ಮರೀಚಿಕೆ$~
Subscribe to:
Posts (Atom)














